ADVERTISEMENT

ಮಧ್ಯರಾತ್ರಿ 2 ಗಂಟೆಗೆ ಅಜಿತ್ ಡೊಬಾಲ್ ಬಂದು ಮಸೀದಿ ತೆರವುಗೊಳಿಸಿದರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 7:24 IST
Last Updated 2 ಏಪ್ರಿಲ್ 2020, 7:24 IST
ಅಜಿತ್ ಡೊಬಾಲ್
ಅಜಿತ್ ಡೊಬಾಲ್   

ನವದೆಹಲಿ:ಬಂಗ್ಲೇವಾಲಿ ಮಸೀದಿ ಖಾಲಿ ಮಾಡುವಂತೆ ದೆಹಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಮನವಿ ಮಾಡಿದರೂ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಕೇಳಲಿಲ್ಲ.ಕೊನೆಗೆ ಈ ಕಾರ್ಯವನ್ನು ಮಾಡಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಬರಬೇಕಾಯಿತು.

ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಡೊಬಾಲ್ ಅವರು ಮಾರ್ಚ್ 28-29ರ ರಾತ್ರಿ2 ಗಂಟೆಗೆ ಮರ್ಕಜ್‌ಗೆ ಬಂದು ಮಸೀದಿಯಲ್ಲಿರುವ ಜನರನ್ನು ಕೋವಿಡ್-19 ತಪಾಸಣೆ ನಡೆಸಿ ಕ್ವಾರಂಟೈನ್‌ನಲ್ಲಿರಿಸುವಂತೆ ಮೌಲಾನಾ ಸಾದ್ ಮನವೊಲಿಸಿದ್ದಾರೆ.

ADVERTISEMENT

ಮಾರ್ಚ್ 18ರಂದು ಮರ್ಕಜ್‌ನಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾದ 9 ಪ್ರಜೆಗಳಿಗೆ ಕೋವಿಡ್ ರೋಗ ದೃಢಪಟ್ಟಿದೆ ಎಂದು ತೆಲಂಗಾಣದ ಕರೀಂನಗರದಿಂದ ವರದಿಯಾಗಿತ್ತು.ಈ ಹಿನ್ನಲೆಯಲ್ಲಿ ಭದ್ರತಾ ಸಂಸ್ಥೆಯು ಎಲ್ಲ ರಾಜ್ಯದ ಪೊಲೀಸ್ ಮತ್ತು ಇತರ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಿತ್ತು .

ಏತನ್ಮಧ್ಯೆ ಮರ್ಕಜ್ 167 ತಬ್ಲಿಗಿ ನೌಕರರನ್ನು ಮಾರ್ಚ್ 27, 28 ಮತ್ತು 29ರಂದು ಆಸ್ಪತ್ರೆಗೆ ದಾಖಲಿಸಿತ್ತು.ಡೊಬಾಲ್ ಅವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ನಂತರವೇ ಜಮಾತ್ ನಾಯಕತ್ವವು ಮಸೀದಿ ಶುಚೀಕರಣಕ್ಕೆ ಒಪ್ಪಿದ್ದು. ಕಳೆದ ದಶಕಗಳಿಂದ ಡೊಬಾಲ್ ಅವರು ಭಾರತದ ಒಳಗೆ ಮತ್ತು ಹೊರಗೆ ಹಲವಾರು ಮುಸ್ಲಿಂ ಚಳವಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಇದೀಗ ಎರಡನೇ ಹಂತದ ಕಾರ್ಯಾಚರಣೆ ಇಲ್ಲಿ ನಡೆಯುತ್ತಿದೆ. ಈ ಕಾರ್ಯಾಚರಣೆಯಲ್ಲಿ ಎಲ್ಲ ವೀಸಾಗಳನ್ನು ಪರಿಶೀಲಿಸಲಾಗುತ್ತಿದೆ. ದೆಹಲಿಯಲ್ಲಿರುವ ಮರ್ಕಜ್‌ನಲ್ಲಿ 216 ಮಂದಿ ವಿದೇಶೀಯರಿದ್ದಾರೆ. ಆದರೆ ದೇಶದ ವಿವಿಧ ಭಾಗಗಳಲ್ಲಿ 800ಕ್ಕಿಂತಲೂ ಹೆಚ್ಚು ವಿದೇಶಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಇಂಡೊನೇಷ್ಯಾ, ಮಲೇಷ್ಯಾ ಮತ್ತು ಬಾಂಗ್ಲಾದೇಶದವರಾಗಿದ್ದಾರೆ.

ಜನವರಿಯ ನಂತರ ಸುಮಾರು 2,000 ವಿದೇಶಿಯರು ಮರ್ಕಜ್‌ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಹೆಚ್ಚಿನವರು ವೀಸಾ ನಿಯಮ ಉಲ್ಲಂಘಿಸಿ ಭಾರತಕ್ಕೆ ಬಂದವರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ಮಿಷನರಿ ಕೆಟಗರಿಯಡಿಯಲ್ಲಿಯೇ ವೀಸಾ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಪದೇ ಪದೇ ಹೇಳಿದ್ದರೂ ಇಲ್ಲಿಗೆ ಬಂದವರು ಅದನ್ನು ಪಾಲಿಸಿಲ್ಲ. ವೀಸಾ ನಿಯಮ ಉಲ್ಲಂಘಿಸಿದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಮತ್ತೊಮ್ಮೆ ದೇಶಕ್ಕೆ ಪ್ರವೇಶಿಸದಂತೆ ತಡೆಯಲಾಗುವುದು.
ವಿದೇಶಿಯರ ಹೊರತಾಗಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಎಲ್ಲ ಭಾರತೀಯರನ್ನು ಪತ್ತೆ ಹಚ್ಚಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.