ADVERTISEMENT

ದೆಹಲಿ: ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡಕ್ಕೆ ಬೆಂಕಿ– 27 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 13 ಮೇ 2022, 20:34 IST
Last Updated 13 ಮೇ 2022, 20:34 IST
   

ನವದೆಹಲಿ: ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೊ ನಿಲ್ದಾಣ ಸಮೀಪದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 40ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೆಟ್ರೊದ 544ನೇ ಸಂಖ್ಯೆಯ ಪಿಲ್ಲರ್ ಬಳಿಯ ಕಟ್ಟಡದಲ್ಲಿ ಸಂಜೆ 4.40ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಕೂಡಲೇ30ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಕಟ್ಟಡದಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದರು.

ಕಟ್ಟಡದ 2ನೇ ಅಂತಸ್ತಿನ ಕೊಠಡಿಯಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ. ಈ ಕೊಠಡಿಗೆ ಹೊರಗಿ ನಿಂದ ಬೀಗ ಹಾಕಲಾಗಿತ್ತು. ಕಟ್ಟಡದ ಮಾಲೀಕನನ್ನು ಬಂಧಿಸಿ, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

‘ಬೆಂಕಿ ಅವಘಡ ನಡೆದ ಕಟ್ಟಡದ 2ನೇ ಅಂತಸ್ತಿನಲ್ಲಿ ಸುಮಾರು 150 ಮಂದಿಯಿದ್ದರು. ಇದರಲ್ಲಿ 70-90 ಮಂದಿಯನ್ನು ರಕ್ಷಿಸಲಾಯಿತು. ಕೆಲವರು ಕಟ್ಟಡದ ಮೇಲಿನಿಂದ ಜಿಗಿದರು. ಇನ್ನು ಕೆಲವರು ಹಗ್ಗದ ನೆರವಿನಿಂದ ಇಳಿದರು’ ಎಂದು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯೊಬ್ಬರು ಹೇಳಿದರು.

₹2 ಲಕ್ಷ ಪರಿಹಾರ: ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರ ಹಾಗೂಗಾಯಗೊಂಡವರಿಗೆ ₹50,000 ಪರಿಹಾರವನ್ನುಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

ಸಂಜೆ 4:45ರ ಸುಮಾರಿಗೆ ಮಾಹಿತಿ ಲಭಿಸಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.