ಕಾನ್ರಾಡ್ ಕೆ. ಸಂಗ್ಮಾ
ಶಿಲ್ಲಾಂಗ್: ಮೇಘಾಲಯ ಸಚಿವ ಸಂಪುಟ ಪುನಾರಚನೆಗೆ ಕೆಲವೇ ಗಂಟೆಗಳ ಮುನ್ನವೇ ಹಿರಿಯ ನಾಯಕರಾದ ಎ.ಎಲ್. ಹೆಕ್, ಪಾಲ್ ಲಿಂಗ್ಡೋ, ಅಂಪಾರೀನ್ ಲಿಂಗ್ಡೋ ಸೇರಿದಂತೆ ಎಂಟು ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇಂದು (ಮಂಗಳವಾರ) ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿವರಾದ ಎನ್ಪಿಪಿಯ ಅಂಪಾರೀನ್ ಲಿಂಗ್ಡೋ, ಕಮಿಂಗೋನ್ ಯಂಬೋನ್, ರಕ್ಕಮ್ ಎ. ಸಂಗ್ಮಾ, ಅಬು ತಾಹೆರ್ ಮೊಂಡಲ್, ಯುಡಿಪಿಯ ಪಾಲ್ ಲಿಂಗ್ಡೋ ಮತ್ತು ಕಿರ್ಮೆನ್ ಶಿಲ್ಲಾ, ಎಚ್ಎಸ್ಪಿಡಿಪಿಯ ಶಕ್ಲಿಯಾರ್ ವಾರ್ಜ್ರಿ ಮತ್ತು ಬಿಜೆಪಿಯ ಎ.ಎಲ್. ಹೆಕ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಎನ್ಪಿಪಿ ಶಾಸಕರಾದ ವೈಲಾದ್ಮಿಕಿ ಶಿಲ್ಲಾ, ಸೊಸ್ತೇನೆಸ್ ಸೊಹ್ತುನ್, ಬ್ರೆನಿಂಗ್ ಎ. ಸಂಗ್ಮಾ ಮತ್ತು ತಿಮೋತಿ ಡಿ. ಶಿರಾ ಅವರು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯುಡಿಪಿ ಮುಖ್ಯಸ್ಥ ಮೆಟ್ಬಾ ಲಿಂಗ್ಡೋ ಮತ್ತು ಮಾಜಿ ಸಚಿವ ಲಹ್ಕ್ಮೆನ್ ರಿಂಬುಯಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಶಕ್ಲಿಯಾರ್ ವಾರ್ಜ್ರಿ ಬದಲಿಗೆ ಎಚ್ಎಸ್ಪಿಡಿಪಿ ಶಾಸಕ ಮೆಥೋಡಿಯಸ್ ದಖರ್ ಸಂಪುಟ ಸೇರಲಿದ್ದಾರೆ. ಇತ್ತ ಬಿಜೆಪಿಯ ಎ.ಎಲ್. ಹೆಕ್ ಬದಲಿಗೆ ಸ್ಯಾನ್ಬೋರ್ ಶುಲ್ಲೈ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.