ADVERTISEMENT

ವಿದೇಶಿ ದೇಣಿಗೆ: ‘ಮತಾಂತರ ಮಾಡಿಲ್ಲ’ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ

ಪಿಟಿಐ
Published 17 ಸೆಪ್ಟೆಂಬರ್ 2019, 20:21 IST
Last Updated 17 ಸೆಪ್ಟೆಂಬರ್ 2019, 20:21 IST
   

ನವದೆಹಲಿ: ವಿದೇಶಿ ದೇಣಿಗೆ ಸ್ವೀಕರಿಸುವುದು ಮತ್ತು ಬಳಕೆಗೆ ಸಂಬಂಧಿಸಿದ ನಿಯಮಾವಳಿಯಲ್ಲಿ ಕೇಂದ್ರ ಸರ್ಕಾರವು ಇನ್ನಷ್ಟು ಬದಲಾವಣೆಗಳನ್ನು ಮಾಡಿದೆ. ವಿದೇಶಿ ದೇಣಿಗೆ (ನಿಯಂತ್ರಣ) ನಿಯಮ– 2011ಕ್ಕೆ ಕೆಲವು ಬದಲಾವಣೆಗಳನ್ನು ಮಾಡಿ ಸೋಮವಾರ ಅಧಿಸೂಚನೆಯೊಂದನ್ನು ಹೊರಡಿಸಿದೆ.

ವಿದೇಶದಿಂದ ಧನಸಹಾಯ ಪಡೆಯುವ ಸರ್ಕಾರೇತರ ಸಂಸ್ಥೆಗಳು, ಅದರ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಇನ್ನು, ಜನರನ್ನು ಮತಾಂತರ ಮಾಡಿಸಿರುವ ಆರೋಪ ತಮ್ಮ ವಿರುದ್ಧ ಇಲ್ಲ ಮತ್ತು ಕೋಮು ಸಾಮರಸ್ಯಕ್ಕೆ ಹಾನಿ ಉಂಟುಮಾಡಿರುವುದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ಎದುರಿಸುತ್ತಿಲ್ಲ ಎಂದು ಸರ್ಕಾರದ ಮುಂದೆ ಘೋಷಿಸಿಕೊಳ್ಳಬೇಕಾಗುತ್ತದೆ.

ಹಿಂದಿನ ಎಫ್‌ಸಿಆರ್‌ಎ–2010 ಪ್ರಕಾರ, ವಿದೇಶದಿಂದ ಧನಸಹಾಯ ಪಡೆಯಲು ಸರ್ಕಾರದಿಂದ ಅನುಮತಿ ಕೇಳುವ ಸಂಸ್ಥೆಯ ನಿರ್ದೇಶಕರು ಮಾತ್ರ ಇಂಥ ಘೋಷಣೆ ಮಾಡಬೇಕಾಗಿತ್ತು.

ADVERTISEMENT

ಹೊಸ ನಿಯಮದಲ್ಲಿ ಏನಿದೆ?

l₹25 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆಯನ್ನು ವಿದೇಶದಿಂದ ಪಡೆದರೆ ಅದರ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕಿತ್ತು. ನಿಯಮ ಬದಲಿಸಿ ಈ ವಿನಾಯಿತಿಯನ್ನು ₹1 ಲಕ್ಷಕ್ಕೆ ಏರಿಸಲಾಗಿದೆ

lವಿದೇಶ ಪ್ರವಾಸದಲ್ಲಿದ್ದಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ವಿದೇಶಿ ಆತಿಥ್ಯವನ್ನು ಪಡೆದಿದ್ದರೆ ಆ ಬಗ್ಗೆ ಒಂದು ತಿಂಗಳೊಳಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು

lಹಣವನ್ನು ಎಲ್ಲಿಂದ ಪಡೆಯಲಾಗಿತ್ತು, ಎಷ್ಟು ಹಣವನ್ನು ಪಡೆಯಲಾಗಿತ್ತು (ಭಾರತೀಯ ರೂಪಾಯಿ ಮೌಲ್ಯದಲ್ಲಿ), ಧನಸಹಾಯ ಪಡೆದ ಉದ್ದೇಶ ಮತ್ತು ಅದನ್ನು ಹೇಗೆ ಬಳಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಹಿಂದೆ ಈ ಮಾಹಿತಿ ನೀಡಲು ಎರಡು ತಿಂಗಳ ಕಾಲಾವಕಾಶ ಇತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.