ADVERTISEMENT

ಉಗ್ರರಿಗೆ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರಗಳ ಕೊರತೆ: ಭಾರತೀಯ ಸೇನೆ

ವಾಯು ಮಾರ್ಗದಲ್ಲಿ ತಲುಪಿಸುವ ಪಾಕಿಸ್ತಾನದ ತಂತ್ರ ವಿಫಲ

ಜುಲ್ಫಿಕರ್ ಮಜಿದ್
Published 2 ಸೆಪ್ಟೆಂಬರ್ 2020, 7:44 IST
Last Updated 2 ಸೆಪ್ಟೆಂಬರ್ 2020, 7:44 IST
ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಭಾರತದ ಗಡಿಯೊಳಗೆ ಸ್ಫೋಟಕ ಸಾಮಗ್ರಿಗಳು, ಫೋನ್‌ಗಳನ್ನು ತಲುಪಿಸುವ ಪ್ರಯತ್ನ ವಿಫಲಗೊಳಿಸಿದ್ದ ಭಾರತೀಯ ಭದ್ರತಾ ಪಡೆ–ಸಾಂದರ್ಭಿಕ ಚಿತ್ರ
ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಭಾರತದ ಗಡಿಯೊಳಗೆ ಸ್ಫೋಟಕ ಸಾಮಗ್ರಿಗಳು, ಫೋನ್‌ಗಳನ್ನು ತಲುಪಿಸುವ ಪ್ರಯತ್ನ ವಿಫಲಗೊಳಿಸಿದ್ದ ಭಾರತೀಯ ಭದ್ರತಾ ಪಡೆ–ಸಾಂದರ್ಭಿಕ ಚಿತ್ರ   

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರು ಶಸ್ತ್ರಾಸ್ತ್ರಗಳ ಕೊರತೆ ಎದುರಿಸುತ್ತಿದ್ದಾರೆ. ಭಯೋತ್ಪಾದನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಸಮೀಪ ವಾಯು ಮಾರ್ಗದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಸ್ಪೋಟಕ ಸಾಮಗ್ರಿಗಳನ್ನು ಪೂರೈಸಲು ಹವಣಿಸುತ್ತಿದೆ ಎಂದು ಭಾರತೀಯ ಸೇನೆ ಮಂಗಳವಾರ ತಿಳಿಸಿದೆ.

'ಭಾರತದೊಳಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ನಡೆಸಲು ಪಾಕಿಸ್ತಾನ ನಡೆಸಿದ ತಂತ್ರಗಳು ವಿಫಲವಾಗಿದ್ದು, ಈಗ ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿಯೇ ಶಸ್ತ್ರಾಸ್ತ್ರಗಳನ್ನು ಮೇಲಿನಿಂದ ಎಸೆದು ಹೋಗುವ ಪ್ರಯತ್ನದಲ್ಲಿದೆ' ಎಂದು ಬಾರಾಮುಲಾದಲ್ಲಿನ 19ನೇ ಇನ್‌ಫ್ಯಾಂಟ್ರಿ ಡಿವಿಷನ್‌ನ ಮೇಜರ್‌ ಜನರಲ್‌ ವರಿಂದರ್ ವತ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಬಾರಾಮುಲಾದಲ್ಲಿ ಉಗ್ರರ ಹಲವು ಅಡಗು ತಾಣಗಳಲ್ಲಿ ಸೇನೆ ಕಾರ್ಯಾಚರಣೆ ನಡೆಸಿದೆ. 'ಎಲ್‌ಒಸಿ ಸಮೀಪದ ಗ್ರಾಮಗಳಲ್ಲಿಯೇ ಉಳಿದುಕೊಳ್ಳುವ ಪಾಕಿಸ್ತಾನ ನಿಯೋಜಿತ ಓವರ್‌ ಗ್ರೌಂಡ್‌ ವರ್ಕರ್‌ಗಳು ಶಸ್ತ್ರಾಸ್ತ್ರಗಳನ್ನು ಉಗ್ರರಿಗೆ ತಲುಪಿಸುವ ಕಾರ್ಯ ನಡೆಸುತ್ತಾರೆ. ಆದರೆ, ಈವರೆಗೂ ಅಂಥ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ' ಎಂದಿದ್ದಾರೆ.

ADVERTISEMENT

ಪಾಕಿಸ್ತಾನ ಅತ್ಯಾಧುನಿಕ ಅಸ್ತ್ರಗಳನ್ನು ಕಾಶ್ಮೀರದೊಳಗೆ ತಲುಪಿಸುವ ಪ್ರಯತ್ನ ನಡೆಸಿದೆ. ಆದರೆ, ಭದ್ರತಾ ಪಡೆಗಳ ಎಚ್ಚರಿಕೆ ನಡೆಯಿಂದಾಗಿ ಪೂರೈಕೆ ಕೊಂಡಿ ತುಂಡರಿಸಿರುವುದರಿಂದ ಉಗ್ರರಿಗೆ ಶಸ್ತ್ರಾಸ್ತ್ರಗಳು ತಲುಪಲು ಸಾಧ್ಯವಾಗಿಲ್ಲ. ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ಬಳಿ ಕೇವಲ ಪಿಸ್ತೂಲ್‌ಗಳು ಮಾತ್ರ ಉಳಿದಿರುವುದಾಗಿ ಮೇಜರ್‌ ಜನರಲ್‌ ವರಿಂದರ್‌ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದೆ. ಅಂತಹ ಹಲವು ಪ್ರಕರಣಗಳನ್ನು ನಾವು ಈ ಹಿಂದೆ ಪತ್ತೆ ಮಾಡಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಕಳೆದ ತಿಂಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.