ADVERTISEMENT

ದೆಹಲಿ ಸಂಸದ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ, ಇವರನ್ನು ನೀವು ನೋಡಿರುವಿರಾ?

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 7:23 IST
Last Updated 17 ನವೆಂಬರ್ 2019, 7:23 IST
ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್
ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಂಸದೀಯ ಸಮಿತಿ ಸಭೆಗೆ ಸಂಸದ ಗೌತಮ್‌ ಗಂಭೀರ್‌ ಗೈರುಹಾಜರಾಗಿದ್ದ ಬಳಿಕ ದೆಹಲಿಯಲ್ಲಿ ಗಂಭೀರ್ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್‌ಗಳು ರಾರಾಜಿಸುತ್ತಿವೆ.

ವಾಯುಮಾಲಿನ್ಯ ಹತೋಟಿ ಕುರಿತಂತೆ ಚರ್ಚಿಸಲು ಸಭೆ ಕರೆಯಲಾಗಿದ್ದರೆ, ಗಂಭೀರ್ ಮಾತ್ರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಪಂದ್ಯದ ಕಾಮೆಂಟೇಟರ್ ಆಗಿ ಇಂದೋರ್‌ನಲ್ಲಿದ್ದರು.

ಇವರನ್ನು ಎಲ್ಲಾದರೂ ನೀವು ನೋಡಿರುವಿರಾ? ಇಂದೋರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೊನೆಯ ಬಾರಿಗೆ ಜಿಲೇಬಿ ಸವಿಯುತ್ತ ಕಾಣಿಸಿಕೊಂಡಿದ್ದರು. ಇಡೀ ದೆಹಲಿಯೇ ಇವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಬರೆದಿರುವ ಪೋಸ್ಟರ್‌ಗಳನ್ನು ಐಟಿಒ ಪ್ರದೇಶದಲ್ಲಿ ಅಂಟಿಸಲಾಗಿದೆ.

ADVERTISEMENT

ನವೆಂಬರ್ 15ರಂದು ಆಮ್ ಆದ್ಮಿ ಪಕ್ಷವು ಗಂಭೀರ್ ವಿರುದ್ಧ ಕಿಡಿಕಾರಿದ್ದು, ಟ್ವಿಟರ್‌ನಲ್ಲಿ #ShameOnGautamGambhir ಎಂಬ ಹ್ಯಾಷ್‌‌ಟ್ಯಾಗ್ ಟ್ರೆಂಡ್ ಆಗಿತ್ತು.

ವಿವಿಎಸ್ ಲಕ್ಷ್ಮಣ್ ಅವರ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದ ಫೋಟೊದಲ್ಲಿ ಗಂಭೀರ್ ಜಿಲೇಬಿ ಸವಿಯುತ್ತಿರುವುದು ಕಂಡುಬಂದಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಕುರಿತು ಚರ್ಚಿಸಲು ಕರೆದ ಉನ್ನತ ಮಟ್ಟದ ಸಭೆಯನ್ನು ತ್ಯಜಿಸಿ ಸಂಸದರು ಇಂದೋರ್‌ನಲ್ಲಿನ “ಸಂತೋಷ” ವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆಮ್ ಆದ್ಮಿಟೀಕಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಗಂಭೀರ್, ನನ್ನ ಕ್ಷೇತ್ರದಲ್ಲಿನ ಕೆಲಸವನ್ನು ನೋಡಿ ಜನರು ನನ್ನ ಬಗ್ಗೆ ನಿರ್ಧರಿಸುತ್ತಾರೆ. ಹಣ ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ. ಶ್ರಮದಿಂದ ಸಂಪಾದಿಸಿದ ಹಣದಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ ಮತ್ತು ನನ್ನ ರಾಜಕೀಯ ಮಹತ್ವಾಕಾಂಕ್ಷಿಗಳಿಗೆ ಸಾರ್ವಜನಿಕರ ಹಣವನ್ನು ಬಳಸುವುದಿಲ್ಲ. ಸುಳ್ಳು ಆರೋಪಗಳನ್ನು ದೆಹಲಿಯ ಪ್ರಾಮಾಣಿಕ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿಗೆ ತಿರುಗೇಟು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.