ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ,ಟೆಲಿಗ್ರಾಮ್ ಚಾನೆಲ್ ನಿರ್ವಹಿಸಲು ಬಳಸಲಾಗಿದೆ ಎಂದು ಶಂಕಿಸಲಾಗಿರುವ ಮೊಬೈಲ್ ಫೋನ್ ಅನ್ನು ತಿಹಾರ್ ಜೈಲಿನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೃತ್ಯದ ಹೊಣೆಹೊತ್ತುಕೊಂಡು, ‘ಜೈಷ್ ಉಲ್ ಹಿಂದ್‘ ಸಂಘಟನೆ ಹೆಸರಿನಲ್ಲಿ ಟೆಲಿಗ್ರಾಂ ಚಾನೆಲ್ ರೂಪಿಸಲಾಗಿತ್ತು. ಇದನ್ನು ದೆಹಲಿಯ ತಿಹಾರ್ ಜೈಲಿನ ಬಳಿ ರೂಪಿಸಲಾಗಿದೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ತನಿಖೆಗೆ ಹೊಸ ಸುಳಿವು ದೊರೆಯುತ್ತಿದ್ದಂತೆ ದೆಹಲಿ ಪೊಲೀಸರ ವಿಶೇಷ ಕೋಶವು ಜೈಲು ಅಧಿಕಾರಿಗಳನ್ನು ಸಂಪರ್ಕಿಸಿ, ಮೊಬೈಲ್ ಫೋನ್ ಪತ್ತೆ ಮಾಡಿ ವಶಕ್ಕೆ ಪಡೆಯುವಂತೆ ಕೋರಿದ್ದರು. ಅದರಂತೆ ತಿಹಾರ್ ಜೈಲು ಅಧಿಕಾರಿಗಳು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ಟೆಲಿಗ್ರಾಂ ಚಾನೆಲ್ನ ಕಾರ್ಯಾಚರಣೆಗೆ ಬಳಸಿರುವ ಶಂಕೆಯಿದೆ ಎಂದು ಡಿಸಿಪಿ (ವಿಶೇಷ ಕೋಶ) ಪ್ರಮೋದ್ ಸಿಂಗ್ ಕುಶ್ವಾ ತಿಳಿಸಿದ್ದಾರೆ.
ಮೊಬೈಲ್ ಫೋನ್ ಮತ್ತು ವಶಪಡಿಸಿಕೊಂಡ ವಿವರಗಳನ್ನು ತಿಹಾರ್ ಜೈಲು ಅಧಿಕಾರಿಗಳಿಂದ ಪಡೆದ ನಂತರ ವಿಧಿ ವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.