ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಕೇಂದ್ರ ಸರ್ಕಾರ ಒಂದು ರೂಪಾಯಿ ದೇಣಿಗೆ ನೀಡಿದೆ.
ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ. ಮುರ್ಮು ಅವರು ಬುಧವಾರ ಕೇಂದ್ರ ಸರ್ಕಾರದ ಪರವಾಗಿ ಟ್ರಸ್ಟ್ಗೆ ₹1 ದೇಣಿಗೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಷರತ್ತುಗಳನ್ನು ವಿಧಿಸದೆ ನೀಡುವ ದೇಣಿಗೆ, ಅನುದಾನ, ನೆರವು, ಸ್ಥಿರಾಸ್ತಿಗಳನ್ನು ಒಳಗೊಂಡ ಕೊಡುಗೆಗಳನ್ನು ಟ್ರಸ್ಟ್ ಸ್ವೀಕರಿಸಲಿದೆ. ಹಿರಿಯ ವಕೀಲ ಕೆ.ಪರಾಶರನ್ ಅವರ ನಿವಾಸದಿಂದಲೇ ಟ್ರಸ್ಟ್ ಈಗ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಕಚೇರಿಯನ್ನು ಹೊಂದಲಿದೆ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ದಲಿತ ಸಮುದಾಯದವರೊಬ್ಬರನ್ನು ಒಳಗೊಂಡ 15 ಸದಸ್ಯರ ಟ್ರಸ್ಟ್ ಅನ್ನು ಕೇಂದ್ರ ಸರ್ಕಾರ ರಚನೆ ಮಾಡಿದೆ. ದೆಹಲಿಯ ದಕ್ಷಿಣ ವಲಯದಲ್ಲಿರುವ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿಯೇ ಟ್ರಸ್ಟ್ನ ನೋಂದಾಯಿತ ಕಚೇರಿ ಇರಲಿದೆ ಎಂದು ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.