
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ವಿರೋಧಿಯಾಗಿದ್ದು, ಕೃಷಿಕರನ್ನು ‘ವೈರಿಗಳಂತೆ’ ನೋಡುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಟೀಕಿಸಿದರು.
ರೈತ ಮುಖಂಡರಾದ ಸರವಣ ಸಿಂಗ್ ಪಂಢೇರ ಮತ್ತು ಜಗಜೀತ್ ಸಿಂಗ್ ದಲ್ಲೇವಾಲ್ ಅವರು ಮಾರ್ಚ್ 6ರಂದು ರಾಷ್ಟ್ರ ರಾಜಧಾನಿಯಲ್ಲಿ ರೈತರ ಚಳುವಳಿಗೆ ಕರೆ ನೀಡಿರುವ ಹಿಂದೆಯೇ ಖರ್ಗೆ ಅವರು ಈ ಮಾತು ಹೇಳಿದ್ದಾರೆ.
‘ಎಕ್ಸ್’ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಖರ್ಗೆ, ‘ಕೆಲ ಬಂಡವಾಳಶಾಹಿ ಗೆಳೆಯ’ರಿಗೆ ನೆರವಾಗಲು ಮೋದಿ ನೇತೃತ್ವದ ಸರ್ಕಾರವು ನಿರಂತರವಾಗಿ ರೈತರ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದೆ. ತಮ್ಮ ಹಕ್ಕುಗಳಿಗಾಗಿ ರೈತರು ಹೋರಾಟಕ್ಕೆ ಮುಂದಾದರೆ ಸರ್ಕಾರ ಅವರನ್ನು ವೈರಿಗಳಾಗಿ ನೋಡುತ್ತಿದೆ’ ಎಂದು ಹರಿಹಾಯ್ದರು.’
ದೇಶಕ್ಕೆ ಅನ್ನ ನೀಡುವ ಕೃಷಿಕ, ಹೆಚ್ಚಿನ ಉತ್ಪನ್ನಗಳನ್ನು ಬೆಳೆದು, ರಫ್ತು ಮಾಡಲು ಬಯಸಿದರೆ ಮೋದಿ ಸರ್ಕಾರ ರಫ್ತು ವಹಿವಾಟಿನ ಮೇಲೆ ನಿರ್ಬಂಧ ಹೇರಿದೆ. ಬಿಜೆಪಿ ತನ್ನ ಅಧಿಕಾರ ಅವಧಿ ಉದ್ದಕ್ಕೂ ಇದನ್ನೇ ಮಾಡಿಕೊಂಡು ಬರುತ್ತಿದೆ. ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ ಯುಪಿಎ ಅವಧಿಯಲ್ಲಿ ಶೇ153 ರಷ್ಟಿದ್ದರೆ ಈಗ ಬಿಜೆಪಿ ನೇತೃತ್ವದ ಆಡಳಿತಾವಧಿಯಲ್ಲಿ ಶೇ 64ಕ್ಕೆ ಇಳಿದಿದೆ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.