ಬಿಷ್ಕೆಕ್: ಹಣಕಾಸು ನೆರವು ನೀಡಿ ಭಯೋತ್ಪಾದನಾ ಕೃತ್ಯಗಳಿಗೆ ಯಾವ ದೇಶಗಳು ಕುಮ್ಮಕ್ಕು ನೀಡುತ್ತವೆಯೋ ಆ ದೇಶಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಕಿರ್ಗಿಸ್ತಾನದ ಬಿಷ್ಕೆಕ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಮೋದಿ, ಇಮ್ರಾನ್ ಖಾನ್ ಸಮ್ಮುಖದಲ್ಲೇ ಪಾಕಿಸ್ತಾನಕ್ಕೆ ಈ ಪರೋಕ್ಷ ಎಚ್ಚರಿಕೆ ನೀಡಿದರು.
ಭಯೋತ್ಪಾದನಾ ಮುಕ್ತ ಸಮಾಜ ನಿರ್ಮಾಣಕ್ಕೆ ಭಾರತ ಎಂದೆಂದಿಗೂ ಸಹಕಾರ ನೀಡಲಿದೆ. ಈಪಿಡುಗನ್ನು ಕೊನೆಗಾಣಿಸಲು ಎಲ್ಲ ದೇಶಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.
ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅನುಭವವನ್ನು ಮೋದಿ ಹಂಚಿಕೊಂಡರು. ‘ಅಮಾಯಕರನ್ನು ಬಲಿ ಪಡೆದ ಈ ಘಟನೆ ಮರುಕಳಿಸದಿರಲಿ’ ಎಂದು ಆಶಿಸಿದ ಅವರು, ಸಹಕಾರ ಸಂಘಟನೆ ಸದಸ್ಯ ರಾಷ್ಟ್ರಗಳು ‘ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ಸಂರಚನೆ’ (ರ್ಯಾಟ್ಸ್) ಅಡಿಯಲ್ಲಿ ಉಗ್ರವಾದದ ವಿರುದ್ಧಹೋರಾಡಲು ಕೈಜೋಡಿಸಬೇಕು’ ಎಂದರು.
ಉಗ್ರವಾದದ ತಡೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಂಘಟನೆಯ ರಾಷ್ಟ್ರಗಳು ಜಾಗತಿಕ ಮಟ್ಟದ ಸಮಾವೇಶ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ‘ಸಾಹಿತ್ಯ ಮತ್ತು ಸಂಸ್ಕೃತಿಗಳು ಸಕಾರಾತ್ಮಕ ಆಲೋಚನೆಗಳನ್ನು ಸಮಾಜದಲ್ಲಿ ಬಿತ್ತುತ್ತವೆ. ಇವುಗಳ ಮೂಲಕವೇ ಶಾಂತಿ ಸ್ಥಾಪಿಸಬೇಕಿದೆ ಎಂದರು.
ಅಫ್ಗಾನಿಸ್ತಾನದ ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾರತ ರಚನಾತ್ಮಕವಾಗಿ ತೊಡಗಿಕೊಂಡಿದೆ. ಸಹಕಾರ ಸಂಘಟನೆಯೊಂದಿಗೆ ಅಫ್ಗನ್ನರು ಜೊತೆಯಾಗಲು ಈಗ ರಹದಾರಿ ಸಿದ್ಧವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಿಷ್ಟಾಚಾರ ಮುರಿದ ಇಮ್ರಾನ್: ಅತಿಥಿ ಗಣ್ಯರನ್ನು ಎದ್ದುನಿಂತುಸ್ವಾಗತಿಸದೇ ಇಮ್ರಾನ್ ಖಾನ್ ರಾಜತಾಂತ್ರಿಕ ಶಿಷ್ಟಾಚಾರ ಮುರಿದಿದ್ದಾರೆ. ಈ ವಿಡಿಯೊ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.