ADVERTISEMENT

ಸಿಧುಗೆ ಪಾಕ್‌ನಲ್ಲಿಯೇ ಹೆಚ್ಚು ಪ್ರೀತಿ, ಗೌರವ ದೊರೆಯಲಿದೆ: ಹರ್‌ಸಿಮ್ರತ್ ಕೌರ್

ಏಜೆನ್ಸೀಸ್
Published 29 ನವೆಂಬರ್ 2018, 2:15 IST
Last Updated 29 ನವೆಂಬರ್ 2018, 2:15 IST
ಹರ್‌ಸಿಮ್ರತ್ ಕೌರ್
ಹರ್‌ಸಿಮ್ರತ್ ಕೌರ್   

ಅಮೃತಸರ(ಪಂಜಾಬ್‌):‘ನವಜೋತ್‌ ಸಿಂಗ್‌ ಸಿಧು ಅವರಿಗೆ ಭಾರತಕ್ಕಿಂತ ಪಾಕಿಸ್ತಾನದಲ್ಲಿಯೇ ಹೆಚ್ಚು ಪ್ರೀತಿ ಮತ್ತು ಗೌರವ ಸಿಗುವಂತೆ ಕಾಣುತ್ತಿದೆ’ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ತಾರಪುರ ಕಾರಿಡಾರ್‌ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌‘ಸಿಧು ಅವರು ಪಾಕಿಸ್ತಾನಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಿದರೆ ಗೆಲ್ಲಲಿದ್ದಾರೆ’ ಎಂದ ಹೇಳಿದ ಮಾತಿಗೆ ಕೌರ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆಎಎನ್‌ಐ ವಾಹಿನಿಗೆ ಪ್ರತಿಕ್ರಿಯಿಸಿರುವ ಕೌರ್‌, ‘ನಾನು ಆ ಕಾರ್ಯಕ್ರಮದಲ್ಲಿ ಗಮನಿಸಿದಂತೆ ಸಿಧು ಅವರಿಗೆ ಭಾರತಕ್ಕಿಂತ ಪಾಕ್‌ನಲ್ಲಿಯೇ ಹೆಚ್ಚು ಪ್ರೀತಿ ದೊರೆಯಲಿದೆ. ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಂದು ಇಮ್ರಾನ್‌ ಖಾನ್‌ ನೇರವಾಗಿ ಆಹ್ವಾನ ನೀಡಿದ್ದಾರೆ. ಜೊತೆಗೆ ಸಿಧು ಅಲ್ಲಿಯೂ ಉತ್ತಮ ಸಂಬಂಧ ಹೊಂದಿದ್ದಾರೆ’ ಎಂದಿದ್ದಾರೆ.

‘48 ಗಂಟೆಗಳ ಹಿಂದೆ, ನನ್ನ ಕಣ್ಣ ಎದುರೇ ಜಾದು ಮತ್ತು ಇತಿಹಾಸ ಘಟಿಸಿದನ್ನು ನೋಡಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಭಾಗಗಳಲ್ಲಿಯೂ ಸಂಭ್ರಮ ಮನೆ ಮಾಡಿತ್ತು. ಒಂದು ವೇಳೆ ಬರ್ಲೀನ್‌ ಗೋಡೆ ಮಾಯವಾದರೆ, ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ವೈಮನಸ್ಸು ದೂರವಾದರೆ, ಜರ್ಮನಿ ಹಾಗೂ ಫ್ರಾನ್ಸ್‌ ನಡುವೆ ಗೆಳೆತನ ಚಿಗುರೊಡೆದರೆ, ಆ ಸಮಯ ನಮ್ಮ ನಡುವಿನ ದ್ವೇಷದ ಗೋಡೆಯೂ ಕಳಚುತ್ತದೆ’ ಎಂದು ಹರ್‌ಸಿಮ್ರತ್‌ ಕೌರ್‌ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

‘ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಿ ಮರಳಿದ ಬಳಿಕ ಸಿಧು ಅವರ ಬಗ್ಗೆ ಟೀಕೆಗಳನ್ನು ಕೇಳಿದೆ. ಸಿಧು ಅವರನ್ನು ಭಾರತದಲ್ಲಿ ಯಾಕೆ ಟೀಕೆ ಮಾಡುತ್ತಾರೋ ಗೊತ್ತಿಲ್ಲ. ಅವರು ಶಾಂತಿಯ ಬಗ್ಗೆ ಮಾತನಾಡಿದ್ದಾರಷ್ಟೆ’ ಎಂದು ಇಮ್ರಾನ್‌ ಭಾಷಣದಲ್ಲಿ ಹೇಳಿದ್ದರು.

ಲಾಹೋರ್‌ನಲ್ಲಿ ನಡೆದ ಕರ್ತಾರಪುರ ಕಾರಿಡಾರ್‌ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.