ADVERTISEMENT

ರಾಜ್ಯಸಭೆ: ಮತ್ತಷ್ಟು ವಿರೋಧ ಪಕ್ಷಗಳಿಂದ ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 6:54 IST
Last Updated 15 ಡಿಸೆಂಬರ್ 2021, 6:54 IST
ರಂಜನ್ ಗೊಗೊಯಿ
ರಂಜನ್ ಗೊಗೊಯಿ   

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ರಾಜ್ಯಸಭೆಯಲ್ಲಿ ಮತ್ತಷ್ಟು ವಿರೋಧ ಪಕ್ಷಗಳ ಸಂಸದರು ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಹಾಗೂ ಟಿಎಂಸಿ ಜತೆ ಕೈಜೋಡಿಸಿರುವ ಮತ್ತಷ್ಟು ವಿರೋಧ ಪಕ್ಷಗಳ ಸಂಸದರು, ಗೊಗೊಯಿ ನಿಲುವು ಸದನದ ಘನತೆಗೆ ಧಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆ 'ರಾಜ್ಯಸಭೆಗೆ ಹೋಗಬೇಕು ಎಂದು ನನಗೆ ಅನ್ನಿಸಿದಾಗ ನಾನು ಹೋಗುತ್ತೇನೆ' ಎಂದು ರಂಜನ್ ಗೊಗೊಯಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಶಿವಸೇನೆ, ಸಮಾಜವಾದಿ ಪಕ್ಷ, ಸಿಪಿಐ(ಎಂ) ಮತ್ತು ಮುಸ್ಲಿಂ ಲೀಗ್‌ನ ಸಂಸದರೂ ಈಗ ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ. ಶಿವಸೇನೆಯ ಸಂಜಯ್ ರಾವುತ್, ಸಿಪಿಐ(ಎಂ)ನ ಜಾನ್ ಬ್ರಿಟಾಸ್, ಡಾ.ವಿ. ಶಿವದಾಸನ್ ಮತ್ತು ಮುಸ್ಲಿಂ ಲೀಗ್‌ನ ಅಬ್ದುಲ್ ವಹಾಬ್ ನೋಟಿಸ್ ಸಲ್ಲಿಸಿದ್ದಾರೆ.

ಮಾರ್ಚ್ 2020ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನ್ಯಾಯಮೂರ್ತಿ ಗೊಗೊಯಿ, ಸೋಮವಾರದಂದು ಚಳಿಗಾಲದ ಅಧಿವೇಶನದಲ್ಲಿ ಮೊದಲ ಬಾರಿಗೆ ಪಾಲ್ಗೊಂಡರು. ಈ ಮೂಲಕ ಏಳು ಬಾರಿ ಮಾತ್ರ ಸದನದಲ್ಲಿ ಉಪಸ್ಥಿತರಿದ್ದರು.

ವಿರೋಧ ಪಕ್ಷಗಳ ಹಕ್ಕುಚ್ಯುತಿ ನೋಟಿಸ್‌ಗೆ ಪ್ರತಿಕ್ರಿಯಿಸಿರುವಗೊಗೊಯಿ, 'ಕಾನೂನು ತನ್ನದೇ ಆದ ಹಾದಿಯನ್ನು ತುಳಿಯಲಿದೆ. ನಾನು ಸೋಮವಾರ ಹಾಗೂ ಮಂಗಳವಾರ ಹಾಜರಾಗಿದ್ದೆ.ಇಂದು ಹಾಜರಾಗಿಲ್ಲ. ನಾಳೆ ಹಾಜರಾಗುವೆ. ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.