ಕೊರೊನಾ ಸೋಂಕು ಭೀತಿಯಿಂದ ಕಂಗೆಟ್ಟಿರುವ ಜನರಿಗೆ ನೆಮ್ಮದಿ ನೀಡುವ ಸಿಹಿ ಸುದ್ದಿಯೊಂದುಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಂಗಳದಿಂದ ಹೊರಬಿದ್ದಿದೆ.
‘ಕೋವಿಡ್–19 ವೈರಾಣು ನೈಸರ್ಗಿಕವಾಗಿ ನಾಶವಾಗಲಿದ್ದು, ಲಸಿಕೆ ಮಾರುಕಟ್ಟೆಗೆ ಬರುವ ವೇಳೆಗೆ ಹೆಚ್ಚಿನವರಲ್ಲಿ ತಾನಾಗಿಯೇ ರೋಗನಿರೋಧಕ ಶಕ್ತಿ ಬೆಳೆದಿರುತ್ತದೆ’ ಎಂದು ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗತಜ್ಞರು ಹೇಳಿದ್ದಾರೆ.
’ನಮ್ಮಲ್ಲಿ ಹೆಚ್ಚಿನವರಿಗೆ ಕೋವಿಡ್–19 ಲಸಿಕೆಯ ಅಗತ್ಯವೇ ಇಲ್ಲ. ಈ ವೈರಸ್ಹೇಗೆ ಬಂದಿದೆಯೋ ಹಾಗೆಯೇ ಸ್ವಾಭಾವಿಕವಾಗಿ ಅಂತ್ಯಗೊಳ್ಳಲಿದೆ. ಅದನ್ನು ಹುಟ್ಟು ಹಾಕಿದ ನಿಸರ್ಗವೇ ಅದನ್ನು ನಾಶಗೊಳಿಸುತ್ತದೆ’ ಎಂದುಆಕ್ಸ್ಫರ್ಡ್ ಪ್ರಾಧ್ಯಾಪಕಿ ಮತ್ತು ಸಾಂಕ್ರಾಮಿಕ ರೋಗತಜ್ಞೆ ಸುನೇತ್ರ ಗುಪ್ತಾ ಪ್ರತಿಪಾದಿಸಿದ್ದಾರೆ.
‘ಪ್ರೊಫೆಸರ್ ರಿಓಪನ್’ ಎಂಬ ವಿಡಿಯೊದಲ್ಲಿ ಕೊರೊನಾ ಸೋಂಕು ಮತ್ತು ಲಾಕ್ಡೌನ್ ಪರಿಣಾಮಗಳ ಕುರಿತುಅಭಿಪ್ರಾಯ ಹಂಚಿಕೊಂಡಭಾರತ ಮೂಲದ ಗುಪ್ತಾ ಅವರನ್ನು ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ ಮಾತನಾಡಿಸಿದೆ.
‘ಕೋವಿಡ್–19 ವೈರಸ್ಗೆ ಬಗ್ಗೆ ಜನರು ಅಗತ್ಯಕ್ಕಿಂತ ಹೆಚ್ಚು ಭಯಬೀಳುತ್ತಿದ್ದಾರೆ.ಕೊರೊನಾ ಸೋಂಕಿಗೆ ಯಾರೂ ಹೆದರಬೇಕಾಗಿಲ್ಲ.ಶೀತಜ್ವರದಂತೆ(ಫ್ಲೂ, ಇನ್ಫ್ಲೂಯೆಂಜಾ) ಇದು ಕೂಡ ಬಂದು ಹೋಗುತ್ತದೆ. ಉಳಿದ ಸಣ್ಣಪುಟ್ಟ ಕಾಯಿಲೆಗಳಂತೆ ಇದು ಕೂಡ ನಮ್ಮ ಜೀವನದ ಒಂದು ಭಾಗವಾಗಲಿದೆ’ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ, ಲಾಕ್ಡೌನ್ ಬಗ್ಗೆ ಗುಪ್ತಾ ಹೇಳುವುದೇನು?
* ಕೊರೊನಾದ ಇತಿಹಾಸ ಗೊತ್ತಿರುವ ಕಾರಣ ಲಸಿಕೆ ಕಂಡು ಹಿಡಿಯುವುದು ಕಷ್ಟದ ಕೆಲಸವಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಕೊರೊನಾಕ್ಕೆ ಪರಿಣಾಮಕಾರಿ ಔಷಧ ಮಾರುಕಟ್ಟೆಗೆ ಬರಲಿದೆ.
* ಕೋವಿಡ್–19 ಲಸಿಕೆ ಮಾರುಕಟ್ಟೆಗೆ ಬರುವ ಹೊತ್ತಿಗೆ ಬಹುತೇಕ ಜನರಲ್ಲಿ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ಬೆಳೆದಿರುತ್ತದೆ. ಆಗ ಲಸಿಕೆಯ ಅಗತ್ಯವಿರುವುದೇ ಇರುವುದಿಲ್ಲ.
* ಆರೋಗ್ಯವಂತರು, ರೋಗ ನಿರೋಧಕಶಕ್ತಿ ಚೆನ್ನಾಗಿರುವವರು, ಯುವಕರು ಸೋಂಕಿಗೆ ಆತಂಕಗೊಳ್ಳುವ ಅಗತ್ಯವಿಲ್ಲ.
* ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆಲಾಕ್ಡೌನ್ ಒಳ್ಳೆಯ ಕಲ್ಪನೆಯಾದರೂ ಅದು ತಾತ್ಕಾಲಿಕ ಕ್ರಮವಷ್ಟೇ. ಲಾಕ್ಡೌನ್ ದೀರ್ಘಕಾಲೀನ ಮತ್ತು ಪರಿಣಾಮಕಾರಿ ಪರಿಹಾರ ಕ್ರಮವಾಗಲಾರದು.
* ಈ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಲಾಕ್ಡೌನ್ ಕ್ರಮವೊಂದೇ ಸಾಲದು. ಅದಕ್ಕೆ ಪೂರಕವಾಗಿ ಸರಿಯಾದ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರದ ನೆರವು ಬೇಕಾಗುತ್ತದೆ.ಯಶಸ್ವಿಯಾಗಿ ಲಾಕ್ಡಾನ್ ಜಾರಿ ಮಾಡಿದ ಕೆಲವು ರಾಷ್ಟ್ರಗಳಲ್ಲಿ ಮತ್ತೆ ಈಗ ಕೋವಿಡ್–19 ಉಲ್ಬಣಿಸಿದ ನಿದರ್ಶನಗಳಿವೆ.
* ವಿಷಮಶೀತ ಜ್ವರದಿಂದ ಸಾವನ್ನಪ್ಪುವ ಪ್ರಮಾಣಕ್ಕಿಂತ ಕೋವಿಡ್–19 ಸೋಂಕಿನಿಂದ ಸಾಯುವವರ ಪ್ರಮಾಣ ಕಡಿಮೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.