ನವದೆಹಲಿ: ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರದ ವೇಳೆ ಮಾದರಿ ಸಂಹಿತೆಯನ್ನು ಪದೇ ಪದೆ ಉಲ್ಲಂಘಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರ 'ಸ್ಟಾರ್ ಪ್ರಚಾರಕ' ಸ್ಥಾನಮಾನವನ್ನು ಚುನಾವಣಾ ಆಯೋಗ ಶುಕ್ರವಾರ ರದ್ದುಪಡಿಸಿದೆ.
'ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಅವರಿಗೆ ನೀಡಲಾದ ಸಲಹೆಯನ್ನು ಸಂಪೂರ್ಣ ಕಡೆಗಣಿಸಿದ್ದಕ್ಕಾಗಿ, ಆಯೋಗವು ಕಮಲ್ನಾಥ್ ಅವರ ರಾಜಕೀಯ ಪಕ್ಷದ ನಾಯಕ (ಸ್ಟಾರ್ ಪ್ರಚಾರ) ಸ್ಥಾನಮಾನವನ್ನು ಈ ಉಪ ಚುನಾವಣೆಗೆ ಅನ್ವಯವಾಗುವಂತೆ ಈ ಕೂಡಲೇ ರದ್ದುಪಡಿಸಲಾಗಿದೆ,' ಎಂದು ಆಯೋಗ ಶುಕ್ರವಾರ ಆದೇಶ ಹೊರಡಿಸಿದೆ.
'ಸ್ಟಾರ್ ಪ್ರಚಾರಕರಾಗಿ ಕಮಲ್ನಾಥ್ ಅವರಿಗೆ ಯಾವುದೇ ಅನುಮತಿ ನೀಡುವುದಿಲ್ಲ,' ಎಂದು ಅದು ಹೇಳಿದೆ.
'ಒಂದು ವೇಳೆ ಇಂದಿನಿಂದ ಕಮಲ್ನಾಥ್ ಅವರು ಯಾವುದೇ ಪ್ರಚಾರ ಕೈಗೊಂಡರೆ, ಪ್ರಯಾಣ, ವಾಸ್ತವ್ಯ ಮತ್ತು ಭೇಟಿಗೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ಕ್ಷೇತ್ರದ ಅಭ್ಯರ್ಥಿಯೇ ಭರಿಸಬೇಕು,' ಎಂದು ಆಯೋಗ ತಿಳಿಸಿದೆ.
ಇನ್ನು ಚುನಾವಣಾ ಆಯೋಗದ ಆದೇಶದ ವಿರುದ್ಧ ಕಾಂಗ್ರೆಸ್ ಕೋರ್ಟ್ ಮೊರೆ ಹೋಗುವುದಾಗಿ ಮಧ್ಯಪ್ರದೇಶ ಕಾಂಗ್ರೆಸ್ನ ಮಾಧ್ಯಮ ಸಮನ್ವಯಕಾರ ನರೇಂದ್ರ ಸಲುಜಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.