ಸಿಧಿ: ಜಿಲ್ಲೆಯ ಪಟ್ನಾ ಹಳ್ಳಿಯ ಸಮೀಪದ ಕಾಲುವೆಗೆ ಬಸ್ ಉರುಳಿ ಬಿದ್ದು 51 ಮಂದಿ ಸಾವನ್ನಪ್ಪಿದ ಘಟನೆಯಲ್ಲಿ ಇನ್ನೂ ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದು, ಶೋಧ ಕಾರ್ಯಕ್ಕಾಗಿ ಸೇನೆಯ ನೆರವು ಕೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲುವೆಯೊಳಗೆ ಮೂರು ಕಿ.ಮೀ ಉದ್ದದ ಸುರುಂಗವಿದ್ದು, ಅದರೊಳಗೆ ಅಮ್ಲಜನಕ ಪೂರೈಕೆ ಕಡಿಮೆ ಇದೆ. ಮೂವರು ಪ್ರಯಾಣಿಕರ ಪತ್ತೆಗಾಗಿ ಸುರಂಗದಲ್ಲಿ ಶೋಧ ಕಾರ್ಯಾಚರಣೆ ನಡೆಸಬೇಕಾಗಿದೆ. ಅದಕ್ಕಾಗಿ ತಜ್ಞರ ನೆರವು ಕೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಜಬಲ್ಬುರದ ಸೇನಾ ತಂಡವು ಶೀಘ್ರದಲ್ಲೇ ರಾಷ್ಟ್ರೀಯ ವಿಪತ್ತು ಪಡೆಯ ತಂಡವನ್ನು ಸೇರಲಿದೆ‘ ಎಂದು ಸಿಧು ಜಿಲ್ಲೆಯ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಚೌಧರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘32 ಆಸನಗಳ ಸಾಮರ್ಥ್ಯವಿರುವ ಈ ಬಸ್ನಲ್ಲಿ ಅಪಘಾತಕ್ಕೀಡಾದ ಸಮಯದಲ್ಲಿ ಚಾಲಕ ಸೇರಿ 61 ಮಂದಿ ಪ್ರಯಾಣಿಸುತ್ತಿದ್ದರು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿವರೆಗೆ 51 ಮಂದಿಯ ಶವವನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ. ಬಸ್ ಚಾಲಕ ಸೇರಿ ಏಳು ಮಂದಿಯನ್ನು ರಕ್ಷಿಸಲಾಗಿದೆ. ಬಸ್ ಚಾಲಕನನ್ನು ಬಂಧಿಸಲಾಗಿದೆ.
ಬಸ್ನಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರು. ಸತ್ನಾದಲ್ಲಿ ಪರೀಕ್ಷೆ ಬರೆಯುವುದಕ್ಕಾಗಿ 40ಕ್ಕೂ ಹೆಚ್ಚು ಮಂದಿ ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಚಾಲಕ ವಿಚಾರಣೆ ವೇಳೆ ತಿಳಿಸಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.