ADVERTISEMENT

ಗೋವಾ ಬದಲು ಅಯೋಧ್ಯೆಗೆ ಕರೆದೊಯ್ದ ಪತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

ಪಿಟಿಐ
Published 26 ಜನವರಿ 2024, 3:36 IST
Last Updated 26 ಜನವರಿ 2024, 3:36 IST
   

ಭೋಪಾಲ್‌: ಹನಿಮೂನ್‌ಗೆ ಗೋವಾ ಬದಲು ಆತನ ಪೋಷಕರೊಂದಿಗೆ ಅಯೋಧ್ಯೆ–ವಾರಾಣಸಿಗೆ ಕರೆದೊಯ್ದ ಕಾರಣಕ್ಕೆ ಮಧ್ಯಪ್ರದೇಶದ ಮಹಿಳೆಯೊಬ್ಬರು ಪತಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವಿಚ್ಛೇದನದ ಅರ್ಜಿಯು ಕೌನ್ಸೆಲಿಂಗ್ ಹಂತದಲ್ಲಿ ಬಾಕಿ ಉಳಿದಿದ್ದು, ಮಹಿಳೆ ಮತ್ತು ಆಕೆಯ ಪತಿ ನಡುವೆ ಸೌಹಾರ್ದಯುತ ಪರಿಹಾರಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕೌಟುಂಬಿಕ ನ್ಯಾಯಾಲಯದ ವಿವಾಹ ಸಲಹೆಗಾರ ಶೈಲ್ ಅವಸ್ತಿ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವರ್ಷ ಮೇ 3 ರಂದು ಇಬ್ಬರೂ ವಿವಾಹವಾಗಿದ್ದು, ವಿದೇಶಕ್ಕೆ ಹನಿಮೂನ್‌ಗೆ ಹೋಗುವಂತೆ ಮಹಿಳೆ ಹಠ ಹಿಡಿದಿದ್ದಳು. ಪತಿ ಐಟಿ ಕಂಪನಿಯಲ್ಲಿ ಹಾಗೂ ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿಗೆ ಹನಿಮೂನ್‌ಗಾಗಿ ವಿದೇಶಕ್ಕೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಗೋವಾ ಅಥವಾ ದಕ್ಷಿಣ ಭಾರತದಲ್ಲೇ ಸಾಧ್ಯವಿರುವ ಸ್ಥಳಗಳಿಗೆ ಹೋಗಬೇಕೆಂದು ನಿರ್ಧರಿಸಿ, ತಮ್ಮ ಪೋಷಕರನ್ನು ಸಹ ಕರೆದೊಯ್ಯಬೇಕು ಎಂದು ಷರತ್ತು ವಿಧಿಸಿದ್ದನು ಎಂದು ಅವಸ್ತಿ ತಿಳಿಸಿದ್ದಾರೆ.

ADVERTISEMENT

ಪತಿ, ಹೆಂಡತಿಗೆ ತಿಳಿಸದೆ ಅಯೋಧ್ಯೆ ಮತ್ತು ವಾರಾಣಸಿಗೆ ವಿಮಾನ ಟಿಕೆಟ್‌ಗಳನ್ನು ಬುಕ್‌ ಮಾಡಿ, ಹೊರಡುವ ಒಂದು ದಿನದ ಮೊದಲು  ರಾಮಮಂದಿರದ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ತನ್ನ ತಾಯಿ ಅಯೋಧ್ಯೆಗೆ ಭೇಟಿ ನೀಡಲು ಬಯಸಿದ್ದಾರೆ ಎಂದು ಪ್ರವಾಸದ ಬಗ್ಗೆ ತಿಳಿಸಿದ್ದಾನೆ. ಆ ಸಮಯದಲ್ಲಿ ಮಹಿಳೆ ಆಕ್ಷೇಪಿಸಲಿಲ್ಲ ಆದರೆ ಕುಟುಂಬವು ಹಿಂತಿರುಗಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಮಹಿಳೆ ತನ್ನ ಹೇಳಿಕೆಯಲ್ಲಿ ಪುರುಷನು ತನ್ನ ಹೆತ್ತವರನ್ನು ತನಗಿಂತ ಹೆಚ್ಚು ಕಾಳಜಿ ವಹಿಸಿದ್ದಾನೆ ಎಂದು ಹೇಳಿದ್ದಾಳೆ’ ಎಂದು ವಿಚ್ಛೇದನ ಅರ್ಜಿಯನ್ನು ಉಲ್ಲೇಖಿಸಿ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.