ADVERTISEMENT

ಮುಲಾಯಂ ಯಾದವ್ ಪ್ರಧಾನಿ ಮೋದಿಯಂತೆ ಫೇಕ್ ಅಲ್ಲ: ಮಾಯಾವತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 13:04 IST
Last Updated 19 ಏಪ್ರಿಲ್ 2019, 13:04 IST
   

ಮೈನ್‌ಪುರಿ: ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಜತೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿವೇದಿಕೆ ಹಂಚಿಕೊಂಡಿದ್ದಾರೆ. ಶುಕ್ರವಾರ ಉತ್ತರಪ್ರದೇಶದ ಮೈನ್‍ಪುರಿಯಲ್ಲಿ ನಡೆದ ಚುನಾವಣಾ ಕಾರ್ಯಕ್ರಮದಲ್ಲಿ 24 ವರ್ಷಗಳ ರಾಜಕೀಯ ದ್ವೇಷ ಮರೆತು ಮಾಯಾವತಿ ಮತ್ತು ಮುಲಾಯಂ ಸಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.1995ರಲ್ಲಿ ಇವರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಮೈನ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಈ ರ‍್ಯಾಲಿಯಲ್ಲಿ ಭಾಗವಹಿಸಿ ತಮಗೆ ಬೆಂಬಲ ನೀಡಿದ್ದಕ್ಕಾಗಿ ಮುಲಾಯಂ ಸಿಂಗ್ ಅವರು ಮಾಯಾವತಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ನಮಗೆ ಅಗತ್ಯ ಸಮಯದಲ್ಲಿ ನೆರವಿಗೆ ನಿಂತ ಮಾಯಾವತಿ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರು ಇಲ್ಲಿಗೆ ಬಂದು ನನ್ನ ಪರವಾಗಿ ಮತ ಯಾಚಿಸಿದ್ದು ಖುಷಿಯಾಗಿದೆ ಎಂದಿದ್ದಾರೆ ಮುಲಾಯಂ.

ADVERTISEMENT

1995 ಜೂನ್ 2ರಂದು ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುದಕ್ಕಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಬಿಎಸ್‌ಪಿ ಮುಖ್ಯಸ್ಥೆ ಕಾರ್ಯಕರ್ತರೊಂದಿಗೆ ಠಿಕಾಣಿ ಹೂಡಿದ್ದ ಅತಿಥಿ ಗೃಹಕ್ಕೆ ಬಂದು ದಾಂಧಲೆ ಮಾಡಿದ್ದರು.

ಮುಲಾಯಂ ಸಿಂಗ್ ಅವರ ಮಾತಿಗೆ ಧನ್ಯವಾದ ಹೇಳಿದ ಮಾಯಾವತಿ, ಮುಲಾಯಂ ಸಿಂಗ್ ಅವರು ಸಮಾಜವಾದಿ ಪಕ್ಷದಲ್ಲಿ ಎಲ್ಲ ವಿಭಾಗದ ಜನರಿಗೂ ಪ್ರಾತಿನಿಧ್ಯ ನೀಡಿದ್ದಾರೆ. ಅವರು ಹಿಂದುಳಿದ ವರ್ಗದ ಫೇಕ್ ಸದಸ್ಯರಲ್ಲ. ಅವರು ನಿಜವಾಗಿಯೂ ಹಿಂದುಳಿದ ವರ್ಗದವರಾಗಿದ್ದಾರೆ. ಅವರು ಮೋದಿಯಂತೆ ಫೇಕ್ ಅಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಬಿಎಸ್‌ಪಿ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸಿದೆ ಎಂದು ಮಾಯಾವತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.