ತಹವ್ವುರ್ ರಾಣಾ
ಪಿಟಿಐ ಚಿತ್ರ
ನವದೆಹಲಿ: 26/11ರ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನ ಧ್ವನಿ ಮತ್ತು ಕೈಬರಹದ ಮಾದರಿಗಳನ್ನು ದಾಖಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ದೆಹಲಿಯ ನ್ಯಾಯಾಲಯ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 28ರಂದು ಎನ್ಐಎ ಕೋರಿಕೆಯ ಮೇರೆಗೆ ರಾಣಾ ಅವರ ಕಸ್ಟಡಿ ಅವಧಿಯನ್ನು 12 ದಿನಗಳವರೆಗೆ ವಿಸ್ತರಿಸಿ ವಿಶೇಷ ಎನ್ಐಎ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಆದೇಶಿಸಿದ್ದರು.
ಪಾಕಿಸ್ತಾನ ಮೂಲದ 64 ವರ್ಷದ ಕೆನಡಾ ಉದ್ಯಮಿ ತಹವ್ವುರ್ ರಾಣಾ ಗಡೀಪಾರು ಪ್ರಶ್ನಿಸಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಏಪ್ರಿಲ್ 4ರಂದು ಅಮೆರಿಕ ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಆನಂತರ ಭಾರತಕ್ಕೆ ರಾಣಾನನ್ನು ಬಂಧಿಸಿ ಕರೆತರಲಾಗಿತ್ತು. ಏಪ್ರಿಲ್ 10ರಂದು ನ್ಯಾಯಾಲಯ ಆತನನ್ನು 18 ದಿನಗಳ ಕಸ್ಟಡಿಗೆ ನೀಡಿತ್ತು.
ರಾಣಾ, 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ನಿಕಟ ಸಹಚರನಾಗಿದ್ದಾನೆ.
2008ರ ನವೆಂಬರ್ 26ರಂದು 10 ಮಂದಿ ಪಾಕಿಸ್ತಾನಿ ಉಗ್ರರು ಭಾರತದ ವಾಣಿಜ್ಯ ರಾಜಧಾನಿ ಮುಂಬೈನ ಹಲವೆಡೆ 60 ಗಂಟೆಗಳ ದಾಳಿ ಮಾಡಿದ್ದರು. ಇದರಲ್ಲಿ 166 ಜನರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.