
ಪ್ರೇಯಸಿಗೆ ಚಾಕುವಿನಿಂದ ಚುಚ್ಚಿ ಕೊಂದು, ತಾನೂ ಕತ್ತು ಸೀಳಿ ಆತ್ಮಹತ್ಯೆ ಮಾಡಿಕೊಂಡ!
ಮುಂಬೈ: 24 ವರ್ಷದ ಯುವಕನೊಬ್ಬ ಮಾಜಿ ಪ್ರೇಯಸಿಯನ್ನು ಬೆನ್ನಟ್ಟಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ತಾನೂ ಕತ್ತು ಸೀಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಂದ್ರ ಮುಂಬೈನಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನು ಬರಾಯಿ ಎಂಬಾತ ಈ ಕೃತ್ಯ ಎಸಗಿದ್ದು, ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಮನೀಷಾ ಯಾದವ್ (24) ಎಂಬವರ ಮೇಲೆ ಕಾಲಾಚೌಕಿ ಪ್ರದೇಶದಲ್ಲಿ ರಸ್ತೆಯಲ್ಲೇ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಘಟನೆಯಲ್ಲಿ ಮನೀಷಾಗೆ ತೀವ್ರ ಗಾಯಗಳಾಗಿದ್ದು, ಬೈಕುಲದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಬರಾಯಿಗೆ ಇನ್ನೊಂದು ಸಂಬಂಧ ಇರುವ ಶಂಕೆ ಜಗಳಕ್ಕೆ ಕಾರಣವಾಗಿ ಇವರಿಬ್ಬರು ಸ್ನೇಹವನ್ನು ಅಂತ್ಯಗೊಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ಭೇಟಿಯಾಗಬೇಕು ಎಂದು ಮನೀಷಾರನ್ನು ಕರೆಸಿಕೊಂಡಿದ್ದ ಬರಾಯಿ ಚಾಕು ಹಿಡಿದುಕೊಂಡೇ ಹೋಗಿದ್ದ. ಮನೀಷಾ ಬಂದಾಗ ಎರಡ್ಮೂರು ಬಾರಿ ಇರಿದಿದ್ದಾನೆ. ಈ ವೇಳೆ ಜೀವ ಉಳಿಸಿಕೊಳ್ಳಲು ಆವರು ಸ್ಥಳದಲ್ಲಿದ್ದ ನರ್ಸಿಂಗ್ ಹೋಮ್ ಒಳಗೆ ಓಡಿದ್ದಾರೆ. ನರ್ಸಿಂಗ್ ಹೋಮ್ ಒಳಗೂ ಅವರನ್ನು ಹಿಡಿದು ಹಲ್ಲೆ ಮುಂದುವರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಲು ಮುಂದಾದವರೂ, ಆರೋಪಿ ಆಯುಧಪಾಣಿಯಾಗಿದ್ದರಿಂದ ಹಿಂಜರಿದಿದ್ದಾರೆ. ಈ ವೇಳೆ ಯಾರೋ ಒಬ್ಬರು ಆತನ ಮೇಲೆ ಕಲ್ಲು ಎಸೆದು, ಕೋಲಿನಿಂದ ಹೊಡೆದು ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ.
ಈ ಬೇಳೆ ಬರಾಯಿ ಕತ್ತು ಸೀಳಿಕೊಂಡಿದ್ದಾನೆ. ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನರ್ಸಿಂಗ್ ಹೋಮ್ನಲ್ಲಿ ಆತ ಹಲ್ಲೆ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹಲ್ಲೆಕೋರನಿಂದ ಸಂತ್ರಸ್ತೆಯನ್ನು ಕಾಪಾಡಲು ಕೆಲವರು ಯತ್ನಿಸುವ ಹಾಗೂ ಕೆಲವರು ಆರೋಪಿಗೆ ಹೊಡೆಯುವುದು, ಕಲ್ಲೆಸೆಯುವುದು ವಿಡಿಯೊದಲ್ಲಿ ದಾಖಲಾಗಿದೆ.
ಸಮೀಪದಲ್ಲಿ ಕರ್ತವ್ಯನಿರತರಾಗಿದ್ದ ಟ್ರಾಫಿಕ್ ಪೊಲೀಸ್ ಹಾಗೂ ಇನ್ನಿಬ್ಬರು ಸೇರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ.
ನರ್ಸಿಂಗ್ ಹೋಮ್ನ ಪ್ರವೇಶದಲ್ಲಿ ರಕ್ತದಲ್ಲಿ ತೊಯ್ದು ಬಿದ್ದಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಎರಡು ಮೃತದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.