ಭಯೋತ್ಪಾದನೆ ಉಗ್ರವಾದ (ಸಾಂದರ್ಭಿಕ ಚಿತ್ರ)
– ಪ್ರಜಾವಾಣಿ ಚಿತ್ರ
ಮುಂಬೈ: ‘ಲಷ್ಕರ್–ಎ–ಜಿಹಾದಿ’ ಸಂಘಟನೆಯ 14 ಭಯೋತ್ಪಾದಕರು ನಗರ ಪ್ರವೇಶಿಸಿದ್ದು, ಸುಮಾರು 400 ಕೆ.ಜಿಯಷ್ಟು ಆರ್ಡಿಎಕ್ಸ್ ಅನ್ನು 34 ವಾಹನಗಳಲ್ಲಿ ಇರಿಸಿದ್ದಾರೆ ಎಂಬ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
‘ಈ ವಾಹನಗಳನ್ನು ಸ್ಫೋಟಿಸುವ ಮೂಲಕ ದೇಶವನ್ನು ಬೆಚ್ಚಿಬೀಳಿಸಲಾಗುವುದು’ ಎಂಬ ಸಂದೇಶವು ನಗರದ ಸಂಚಾರ ಪೊಲೀಸರ ನಿಯಂತ್ರಣ ಕೊಠಡಿಯ ವಾಟ್ಸ್ಆ್ಯಪ್ ಸಹಾಯವಾಣಿಗೆ ಬಂದಿದೆ.
ಈ ಬೆದರಿಕೆ ಸಂದೇಶ ಕುರಿತು ಅಪರಾಧ ವಿಭಾಗ ತನಿಖೆ ಕೈಗೊಂಡಿದೆ. ಅಲ್ಲದೆ ಈ ಕುರಿತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಇತರ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಂದೇಶ ಕಳಿಸಿದ ವ್ಯಕ್ತಿಯು ‘ಲಷ್ಕರ್–ಎ–ಜಿಹಾದಿ’ ಸಂಘಟನೆಗೆ ತಾನು ಸೇರಿರುವುದಾಗಿ ಉಲ್ಲೇಖಿಸಿದ್ದಾನೆ ಎಂದು ಅವರು ವಿವರಿಸಿದರು.
‘ಸಂದೇಶದ ಮೂಲ ಯಾವುದು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅದರ ಜತೆಗೆ ಪ್ರಮುಖ ಪ್ರದೇಶಗಳಲ್ಲಿ ಶೋಧ ಕಾರ್ಯವನ್ನೂ ನಡೆಸಲಾಗಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿವಿಧೆಡೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಅವರು ಹೇಳಿದರು.
ಯಾವುದೇ ಸಂಶಯಾಸ್ಪದ ವಸ್ತುಗಳು ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಹಾಗೂ ವದಂತಿಗಳಿಗೆ ಕಿವಿಗೊಡದಂತೆ ಪೊಲೀಸರು ಮುಂಬೈ ಜನರಲ್ಲಿ ಮನವಿ ಮಾಡಿದ್ದಾರೆ.
ಗಣೇಶ ಉತ್ಸವದ 10ನೇ ದಿನವಾದ ಅನಂತ ಚತುರ್ಥಿಯಂದು (ಶನಿವಾರ) ಲಕ್ಷಾಂತರ ಜನರು ನಗರದ ರಸ್ತೆಗಳಲ್ಲಿ ಸೇರಲಿದ್ದಾರೆ. ಇದೇ ವೇಳೆ ಬೆದರಿಕೆ ಸಂದೇಶ ಬಂದಿರುವುದರಿಂದ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.