ADVERTISEMENT

ಮಹಾರಾಷ್ಟ್ರ: ವಿಲೀನದತ್ತ ಎನ್‌ಸಿಪಿ ಬಣಗಳು?

ಪಿಟಿಐ
Published 30 ಜನವರಿ 2026, 15:46 IST
Last Updated 30 ಜನವರಿ 2026, 15:46 IST
<div class="paragraphs"><p>ಅಜಿತ್ ಪವಾರ್ ಮತ್ತು ಶರದ್ ಪವಾರ್</p></div>

ಅಜಿತ್ ಪವಾರ್ ಮತ್ತು ಶರದ್ ಪವಾರ್

   

ಮುಂಬೈ: ಅಜಿತ್ ಪವಾರ್‌ ಅವರ ನಿಧನದ ಬೆನ್ನಲ್ಲೇ ಎನ್‌ಸಿಪಿ ಬಣಗಳ ವಿಲೀನಕ್ಕೆ ಸಂಬಂಧಿಸಿದ ಮಾತುಗಳು ಮುನ್ನೆಲೆಗೆ ಬಂದಿವೆ. 

ಅಜಿತ್ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಎರಡು ಬಣಗಳ ವಿಲೀನಕ್ಕೆ ಸಂಬಂಧಿಸಿದ ಮಾತುಕತೆಯು ಅಜಿತ್‌ ನಿಧನಕ್ಕೂ ಮುನ್ನವೇ ‘ಸಾಕಷ್ಟು ಪ್ರಗತಿ’ ಸಾಧಿಸಿತ್ತು ಎಂದು ಮೂಲಗಳು ತಿಳಿಸಿವೆ. ಎರಡು ಬಣಗಳ ವಿಲೀನವು ಮಹಾರಾಷ್ಟ್ರದ ರಾಜಕೀಯದ ದಿಕ್ಕನ್ನು ಬದಲಿಸುವ ಸಾಧ್ಯತೆಯಿದೆ.

ADVERTISEMENT

ವಿಲೀನದ ಬಳಿಕ ಒಂದುಗೂಡಲಿರುವ ಎನ್‌ಸಿಪಿ ನೇತೃತ್ವವನ್ನು ಅನುಭವಿ ನಾಯಕ ಶರದ್ ಪವಾರ್ ಅವರು ವಹಿಸುವರು ಎಂದು ಎನ್‌ಸಿಪಿ (ಎಸ್‌ಪಿ) ಭಾವಿಸುತ್ತದೆ. ಆದರೆ ಆಡಳಿತಾರೂಢ ಎನ್‌ಸಿಪಿಯು ಅಜಿತ್ ಅವರ ಪತ್ನಿ ಸುನೇತ್ರಾ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಲು ಬಯಸಿದೆ. ಅಜಿತ್ ಅವರು ಬದುಕಿದ್ದಾಗಲೇ ವಿಲೀನದ ಮಾತುಕತೆ ಶುರುವಾಗಿತ್ತು. ಈಚೆಗೆ ನಡೆದ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಪುಣೆ ಮತ್ತು ಪಿಂಪ್ರಿ ಚಿಂಚವಾಡದಲ್ಲಿ ಎರಡೂ ಬಣಗಳು ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದವು. ಈ ಚುನಾವಣೆಯ ಬಳಿಕ ಎನ್‌ಸಿಪಿಯ ಎರಡು ಬಣಗಳ ನಡುವೆ ವಿಲೀನದ ಮಾತುಕತೆ ವೇಗವನ್ನು ಪಡೆದುಕೊಂಡಿದೆ. 

ಮುಂಬರುವ ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿ ಚುನಾವಣೆಯ ಬಳಿಕ ಫೆಬ್ರುವರಿ 8ರಂದು ವಿಲೀನದ ಅಧಿಕೃತ ಘೋಷಣೆ ಮಾಡಲು ಯೋಜಿಸಲಾಗಿತ್ತು ಎಂದು ಎನ್‌ಸಿಪಿ (ಎಸ್‌ಪಿ) ಮೂಲಗಳು ತಿಳಿಸಿವೆ. ‘ಕುಟುಂಬ ಮತ್ತು ಪಕ್ಷವನ್ನು ಮತ್ತೆ ಒಟ್ಟಿಗೆ ಸೇರಿಸುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ. ಬಣಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಅಜಿತ್ ಅವರು ಹಿರಿಯ ನಾಯಕರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ’ ಎಂದು ಹೇಳಿವೆ.

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ 40 ಸ್ಥಾನಗಳನ್ನು ಹೊಂದಿದೆ (ಬಾರಾಮತಿ ಹೊರತುಪಡಿಸಿ). ಶರದ್ ಪವಾರ್ ಬಣವು 10 ಸ್ಥಾನಗಳನ್ನು ಹೊಂದಿದೆ. ವಿಲೀನದ ನಂತರ ಏಕೀಕೃತ ಪಕ್ಷವು ಬಿಜೆಪಿ ನೇತೃತ್ವದ ‘ಮಹಾಯುತಿ’ ಸರ್ಕಾರದ ಭಾಗವಾಗಿ ಉಳಿಯುತ್ತದೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಪಕ್ಷವು ಆಡಳಿತಾರೂಢ ಮೈತ್ರಿಕೂಟದಿಂದ ಹೊರಬಂದರೂ ದೇವೇಂದ್ರ ಫಡಣವೀಸ್ ಸರ್ಕಾರವು ಸುಭದ್ರವಾಗಿ ಉಳಿಯುತ್ತದೆ. ಏಕೆಂದರೆ 288 ಸದಸ್ಯ ಬಲದ ಸದನದಲ್ಲಿ ಎನ್‌ಸಿಪಿ ಸೇರಿದಂತೆ ಮೈತ್ರಿಕೂಟವು ಪ್ರಸ್ತುತ 235 ಶಾಸಕರ ಬಲವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.