ADVERTISEMENT

ಕೋವಿಡ್ ಪರಿಹಾರ: ಆರ್‌ಟಿಪಿಸಿಆರ್‌ ವರದಿಯಷ್ಟೆ ಮಾನದಂಡವಲ್ಲ ಎಂದ ಬಾಂಬೆ ಹೈಕೋರ್ಟ್‌

‘ಇತರ ವರದಿಗಳಿಂದಲೂ ನಿರ್ಧರಿಸಬಹುದು’

ಪಿಟಿಐ
Published 14 ಜನವರಿ 2026, 13:51 IST
Last Updated 14 ಜನವರಿ 2026, 13:51 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ಇತರ ಎಲ್ಲ ವರದಿಗಳಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದ್ದರೂ, ಆರ್‌ಟಿಪಿಸಿಆರ್‌ ವರದಿಯಲ್ಲಿ ಸೋಂಕು ದೃಢಪಟ್ಟಿಲ್ಲ ಎಂಬುದು ಪರಿಹಾರ ನಿರಾಕರಣೆಗೆ ಮಾನದಂಡವಾಗಬಾರದು ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. 

ಆರೋಗ್ಯ ಕಾರ್ಯಕರ್ತೆಯಾಗಿದ್ದ ತನ್ನ ಪತ್ನಿಯನ್ನು ಕೋವಿಡ್ ಸೋಂಕಿನಿಂದಾಗಿ ಕಳೆದುಕೊಂಡ ವ್ಯಕ್ತಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ₹50 ಲಕ್ಷ ವಿಮಾ ಪರಿಹಾರ ವಿತರಿಸುವ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಹೈಕೋರ್ಟ್‌ನ ಔರಂಗಬಾದ್‌ ಪೀಠವು ಅಹಲ್ಯಾನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.

‘ಮೃತ ಮಹಿಳೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು ಎಂಬುದನ್ನು ದೃಢಪಡಿಸುವ ಆರ್‌ಟಿಪಿಸಿಆರ್‌ ವರದಿಯನ್ನು ನೀಡಿಲ್ಲ ಎಂಬ ಏಕೈಕ ಕಾರಣಕ್ಕೆ ಪರಿಹಾರ ವಿತರಣೆಯನ್ನು ನಿರಾಕರಿಸಿರುವುದು ಸರಿಯಲ್ಲ’ ಎಂದು ನ್ಯಾಯಮೂರ್ತಿಗಳಾದ ಅರುಣ್ ಪೆಡ್ನೆಕರ್ ಮತ್ತು ವೈಶಾಲಿ ಜಾಧವ್‌ ಅವರ ಪೀಠ ಹೇಳಿದೆ. 

ADVERTISEMENT

ಇತರ ವೈದ್ಯಕೀಯ ದಾಖಲೆಗಳಾದ ಸಿ.ಟಿ. ಸ್ಕ್ಯಾನ್ ವರದಿ, ಆಮ್ಲಜನಕ ಮಟ್ಟ ಮತ್ತು ಮರಣ ಪ್ರಮಾಣಪತ್ರವು ಮಹಿಳೆ ಕೋವಿಡ್‌ನಿಂದ ಮೃತಪಟ್ಟಿರುವುದನ್ನು ದೃಢಪಡಿಸಿದೆ. ಹಾಗಾಗಿ ಕೋವಿಡ್‌ ಸೋಂಕನ್ನು ನಿರ್ಧರಿಸಲು ಆರ್‌ಟಿಪಿಸಿಆರ್‌ ಒಂದೇ ಮಾನದಂಡವಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕೋವಿಡ್‌ ಸೋಂಕಿನ ಸಂದರ್ಭದಲ್ಲಿ ಮೃತಪಟ್ಟ ಕೋವಿಡ್‌–19 ವಾರಿಯರ್ಸ್, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಕುಟುಂಬಸ್ಥರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಸರ್ಕಾರ ಪರಿಹಾರ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.