ADVERTISEMENT

ನೆಹರು ಜನ್ಮದಿನಾಚರಣೆ: ಲೋಕಸಭೆ ಸ್ಪೀಕರ್, ರಾಜ್ಯಸಭಾಧ್ಯಕ್ಷ ಗೈರು- ಟೀಕೆ

ಪ್ರತಿಪಕ್ಷಗಳಿಂದ ತರಾಟೆ

ಪಿಟಿಐ
Published 14 ನವೆಂಬರ್ 2021, 10:51 IST
Last Updated 14 ನವೆಂಬರ್ 2021, 10:51 IST
ನವದೆಹಲಿಯ ಸಂಸತ್ ಭವನದಲ್ಲಿ ಭಾನುವಾರ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೆ.ಪಿ. ಅಗರ್‌ವಾಲ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. –ಪಿಟಿಐ ಚಿತ್ರ
ನವದೆಹಲಿಯ ಸಂಸತ್ ಭವನದಲ್ಲಿ ಭಾನುವಾರ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೆ.ಪಿ. ಅಗರ್‌ವಾಲ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. –ಪಿಟಿಐ ಚಿತ್ರ   

ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾನುವಾರ ನಡೆದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ರಾಜ್ಯಸಭಾಧ್ಯಕ್ಷ ಹಾಗೂ ಲೋಕಸಭೆಯ ಸ್ಪೀಕರ್ ಗೈರು ಹಾಜರಾದ ಕುರಿತು ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.

ನೆಹರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಇನ್ನಿತರ ನಾಯಕರು ಪಾಲ್ಗೊಂಡಿದ್ದರು.

‘ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾವಚಿತ್ರವನ್ನಿರಿಸಿರುವವರ ಜನ್ಮದಿನಾಚರಣೆಯ ಸಾಂಪ್ರದಾಯಿಕ ಸಮಾರಂಭದಲ್ಲಿ ಇಂದು ಅಸಾಧಾರಣ ದೃಶ್ಯವನ್ನು ಕಂಡೆ. ಲೋಕಸಭೆಯ ಸ್ಪೀಕರ್, ರಾಜ್ಯಸಭಾಧ್ಯಕ್ಷರು ಗೈರು ಹಾಜರಾಗಿದ್ದರು. ಒಬ್ಬ ಸಚಿವರೂ ಉಪಸ್ಥಿತರಿರಲಿಲ್ಲ. ಇದಕ್ಕಿಂತ ಕ್ರೌರ್ಯ ಇನ್ನೇನಿದೆ?’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

ಜೈರಾಮ್ ರಮೇಶ್ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿರುವ ತೃಣಮೂಲ ಕಾಂಗ್ರೆಸ್‌ನ ನಾಯಕ ಡೆರೆಕ್ ಒಬ್ರಿಯಾನ್ ಅವರು ಕೂಡಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಇನ್ನು ಮುಂದೆ ಆಶ್ಚರ್ಯಪಡುವಂಥದ್ದು ನನಗೆ ಏನೂ ಇಲ್ಲ. ಭಾರತದ ಸಂಸತ್ತು ಸೇರಿದಂತೆ ಇನ್ನಿತರ ಶ್ರೇಷ್ಠ ಸಂಸ್ಥೆಗಳನ್ನು ಒಂದು ದಿನ ನಾಶಪಡಿಸಲಾಗುತ್ತದೆ’ ಎಂದೂ ಡೆರೆಕ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.