ADVERTISEMENT

ಮುಖ್ಯಮಂತ್ರಿ ಆಗುವಾಸೆ ಇಲ್ಲ, ಸುಶಿಕ್ಷಿತರನ್ನು ಪೀಠಕ್ಕೇರಿಸುವೆ: 'ತಲೈವಾ' ರಜನಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 6:37 IST
Last Updated 12 ಮಾರ್ಚ್ 2020, 6:37 IST
ನಟ ರಜನೀಕಾಂತ್‌
ನಟ ರಜನೀಕಾಂತ್‌   

ಚೆನ್ನೈ: ತಮಿಳುನಾಡಿನ ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, 'ನನಗೆ ಮುಖ್ಯಮಂತ್ರಿಯಾಗುವ ಮಹಾತ್ವಾಕಾಂಕ್ಷೆ ಯಾವತ್ತಿಗೂ ಇರಲಿಲ್ಲ. ಬದಲಾವಣೆ ಆಗುವುದನ್ನಷ್ಟೇ ಬಯಸಿರುವೆ' ಎಂದು ನಟ ರಜನೀಕಾಂತ್‌ ಹೇಳಿದ್ದಾರೆ.

2017ರ ಡಿಸೆಂಬರ್‌ನಲ್ಲೇ ರಾಜಕೀಯ ಪ್ರವೇಶಿಸುವ ಹಾಗೂ ಪಕ್ಷ ಕಟ್ಟುವ ನಿರ್ಧಾರ ಪ್ರಕಟಿಸಿದ್ದ ರಜನೀಕಾಂತ್‌ ಗುರುವಾರ ಮುಂದಿನ ರಾಜಕೀಯ ನಡೆಯ ಕುರಿತು ಮಾತನಾಡಿದರು. ಮುಖ್ಯಮಂತ್ರಿ ಆಗುವ ಇಚ್ಚೆ ಇಲ್ಲ ಎಂದು ಹೇಳಿಕೊಂಡ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಸುಶಿಕ್ಷಿತ ಮತ್ತು ಸಹಾನುಭೂತಿಯುಳ್ಳ ಯುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕನಸನ್ನು ಬಿಚ್ಚಿಟ್ಟರು.

1996ರಲ್ಲಿ ರಜನೀಕಾಂತ್‌ ಹೇಳಿದ್ದ ಒಂದೇ ಒಂದುಮಾತು ಚುನಾವಣೆಯಲ್ಲಿ ಜಯಲಲಿತಾ ಅವರನ್ನು ಸೋಲಿಸಿ ಡಿಎಂಕೆ ಮೈತ್ರಿ ಜಯಗಳಿಸಿತ್ತು. 'ಅಕಸ್ಮಾತ್‌ ಜಯಲಲಿತಾ ಚುನಾವಣೆಯಲ್ಲಿ ಗೆಲುವು ಪಡೆದರೆ; ಆ ದೇವರಿಂದಲೂ ತಮಿಳುನಾಡನ್ನು ಕಾಪಾಡಲು ಸಾಧ್ಯವಿಲ್ಲ' ಎಂದಿದ್ದರು.

ADVERTISEMENT

'ನಾನು ಯಾವತ್ತಿಗೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯೋಚಿಸಿಲ್ಲ. ರಾಜಕೀಯದಲ್ಲಿ ಬದಲಾವಣೆ ತರುವುದನ್ನಷ್ಟೇ ಬಯಸುತ್ತೇನೆ...ರಾಜಕಾರಣ ಮತ್ತು ಸರ್ಕಾರದಲ್ಲಿ ಈಗ ಬದಲಾವಣೆ ಆಗದಿದ್ದರೆ ಮುಂದೆಂದಿಗೂ ಆಗುವುದಿಲ್ಲ' ಎಂದು ರಜನೀಕಾಂತ್‌ ಹೇಳಿದರು.

'ನಮ್ಮ ರಾಜಕಾರಣದಲ್ಲಿ ಇಬ್ಬರು ಮಹಾನ್‌ ನಾಯಕರು. ಒಬ್ಬರು ಜಯಲಲಿತಾ ಹಾಗೂ ಇನ್ನೊಬ್ಬರು ಕಲೈನಾರ್ (ಎಂ.ಕರುಣಾನಿಧಿ). ಜನರು ಅವರಿಗಾಗಿ ಮತ ನೀಡಿದರು, ಆದರೆ ಈಗ ನಿರ್ವಾತ ಸ್ಥಿತಿ ಎದುರಾಗಿದೆ. ಬದಲಾವಣೆ ತರಲು ನಾವು ಈಗ ಹೊಸ ಅಭಿಯಾನ ನಡೆಸಬೇಕಿದೆ' ಎಂದರು.

ಕಳೆದ ವಾರವಷ್ಟೆ ರಜನಿ ಮಕ್ಕಳ್ ಮಂದ್ರಮ್ (ಆರ್‌ಎಂಎಂ) ಪದಾಧಿಕಾರಿಗಳ ಜತೆ ಗೋಪ್ಯ ಮಾತುಕತೆ ನಡೆಸಿದ್ದ ರಜನೀಕಾಂತ್, ಬಳಿಕ ಮಾಧ್ಯಮದ ಜತೆ ಮಾತನಾಡಿ, 'ಮಾತುಕತೆ ವೇಳೆ ವೈಯಕ್ತಿಕವಾಗಿ ವಿಷಯವೊಂದರ ಕುರಿತು ನನಗೆ ಅಸಮಾಧಾನವಾಗಿದೆ. ಸಮಯ ಬಂದಾಗ ಅದನ್ನು ಬಹಿರಂಗ ಪಡಿಸುವೆ' ಎಂದಿದ್ದರು.

2021ರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದ್ದು, ಪಕ್ಷಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದರು.

ತಮಿಳುನಾಡಿನ ಪ್ರಮುಖಂಡರಾದ ಕರುಣಾನಿಧಿ ಮತ್ತು ಜಯಲಲಿತಾ ಅವರು ಇಲ್ಲದೆ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಲಿದೆ. ಇದು ಮುಖ್ಯಮಂತ್ರಿ ಇ.ಪಳನಿಸ್ವಾಮಿ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ ಎಂದೇ ವಿಶ್ಲೇಷಿಸಲಾಗಿದೆ. ಜಯಲಲಿತಾ ಅವರ ನಿಧನ ನಂತರದಲ್ಲಿ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದಾರೆ.

ನಾಯಕತ್ವದ ಖಾಲಿ ತನ ಅನುಭವಿಸುತ್ತಿರುವ ತಮಿಳುನಾಡು ರಾಜಕೀಯದಲ್ಲಿ ನಟ ಕಮಲ್‌ ಹಾಸನ್‌ ಮತ್ತು ರಜನೀಕಾಂತ್‌ ಜೊತೆಯಾಗಿ ಕಾರ್ಯನಿರ್ವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟ್ಯಾಲಿನ್‌ ಸಹ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈಗಾಗಲೇ ಕಾರ್ಯವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.