ADVERTISEMENT

ವಿದೇಶಿ ದೇಣಿಗೆ ಸಂಗ್ರಹಕ್ಕೆ ನಿಷೇಧ ಸಲ್ಲದು: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 19:31 IST
Last Updated 7 ಮಾರ್ಚ್ 2020, 19:31 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಬಂದ್‌, ಹರತಾಳ, ರೈಲು–ರಸ್ತೆ ತಡೆ ಮುಂತಾಗಿ ಪ್ರಜಾಸತ್ತಾತ್ಮಕ ದಾರಿಯಲ್ಲಿ ಜನಪರ ಹೋರಾಟಗಳಲ್ಲಿ ತೊಡಗಿರುವ, ರಾಜಕೀಯ ಉದ್ದೇಶ ಹೊಂದಿರದ ಸಂಘಟನೆಗಳು ವಿದೇಶಿ ದೇಣಿಗೆ ಸಂಗ್ರಹಿಸುವುದನ್ನು ನಿಷೇಧಿಸಲಾಗದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಇಂಡಿಯನ್‌ ಸೋಷಿಯಲ್‌ ಆ್ಯಕ್ಷನ್‌ ಫೋರಂ (ಇನ್‌ಸಾಫ್‌) ಸಂಘಟನೆ ಕುರಿತ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ವಿಚಾರ ಸ್ಪಷ್ಟಪಡಿಸಿದೆ.

‘ಸಕ್ರಿಯ ರಾಜಕೀಯದ ಜತೆ ಸಂಪರ್ಕ ಹೊಂದಿರುವ ಅಥವಾ ಪಕ್ಷ ರಾಜಕಾರಣದಲ್ಲಿ ತೊಡಗಿರುವ ಸಂಘಟನೆಗಳು ವಿದೇಶಿ ದೇಣಿಗೆ ಸಂಗ್ರಹಿಸುವುದನ್ನು ವಿದೇಶಿ ದೇಣಿಗೆ (ನಿಯಂತ್ರಣ) ನಿಯಮ–2011ರ ಅಡಿ ತಡೆಯಬಹುದು. ಆದರೆ, ತಮ್ಮ ಹಕ್ಕುಗಳಿಗಾಗಿ ಹೋರಾಡುವ ಜನರಿಗೆ ಬೆಂಬಲ ನೀಡುವ, ರಾಜಕೀಯ ಉದ್ದೇಶ ಹೊಂದಿರದ ಸಂಘಟನೆಗಳನ್ನು ವಿದೇಶಿ ದೇಣಿಗೆ ಸಂಗ್ರಹಿಸುವುದರಿಂದ ತಡೆಯುವಂತಿಲ್ಲ ಎಂದು ಹೇಳಿದೆ.

ADVERTISEMENT

‘ನಿಯಮಾವಳಿಯಲ್ಲಿ ಬಳಸಿರುವ ‘ರಾಜಕೀಯ ಹಿತಾಸಕ್ತಿ’ ಎಂಬ ವಿಚಾರದಲ್ಲಿ ಸ್ಪಷ್ಟತೆಯ ಕೊರತೆ ಇದ್ದು, ಅದು ದುರ್ಬಳಕೆಯಾಗುತ್ತಿದೆ’ ಎಂಬ ಇನ್‌ಸಾಫ್‌ ಸಂಘಟನೆಯ ಪರ ವಕೀಲ ಸಂಜಯ್‌ ಪಾರೀಖ್‌ ಅವರ ವಾದವನ್ನು ಒಪ್ಪಿದ ನ್ಯಾಯಾಲಯ, ‘ಜನರ ಸಾಮಾಜಿಕ, ಆರ್ಥಿಕ ಏಳಿಗೆಗಾಗಿ ಕೆಲಸ ಮಾಡುವ, ರಾಜಕೀಯದ ಜತೆಗೆ ಯಾವುದೇ ಸಂಬಂಧ ಹೊಂದಿರದ ಸಂಘಟನೆಯನ್ನು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ–2010 ಅಡಿಯಾಗಲಿ, ನಂತರ ಜಾರಿ ಮಾಡಿದ ನಿಯಮಾವಳಿಗಳ ಅಡಿಯಾಗಲಿ ಪರಿಗಣಿಸಬಾರದು’ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.