
ಶ್ರೀನಗರ: ನವೆಂಬರ್ 10ರಂದು ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೆ ನಾಲ್ವರು ಪ್ರಮುಖ ಸಂಚುಕೋರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ಕಾಶ್ಮೀರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ, ಇದುವರೆಗೂ ಆರು ಜನರನ್ನು ಬಂಧಿಸಿದಂತಾಗಿದೆ.
ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನಾಯಿ, ಅನಂತನಾಗ್ ಜಿಲ್ಲೆಯ ಡಾ.ಆದೀಲ್ ಅಹ್ಮದ್, ಲಖನೌದ ಡಾ.ಶಾಹೀನ್ ಸಯೀದ್, ಶೋಪಿಯಾನ್ ಜಿಲ್ಲೆಯ ಮುಫ್ತಿ ಇರ್ಫಾನ್ ಅಹ್ಮದ್ ವಾಗೆಯನ್ನು ಶ್ರೀನಗರದಲ್ಲಿ ವಶಕ್ಕೆ ಪಡೆಯಲಾಯಿತು. ನಾಲ್ವರ ಬಂಧನಕ್ಕೆ ಸಂಬಂಧಿಸಿದಂತೆ, ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನೀಡಿದ ಆದೇಶವನ್ನು ಶ್ರೀನಗರದ ನ್ಯಾಯಾಲಯಕ್ಕೆ ಸಲ್ಲಿಸಿದ ಎನ್ಐಎ ಅಧಿಕಾರಿಗಳು, ನಾಲ್ವರನ್ನೂ ತಮ್ಮ ವಶಕ್ಕೆ ಪಡೆದುಕೊಂಡರು.
‘ಈ ನಾಲ್ವರು ಕೂಡ ಕೆಂಪುಕೋಟೆ ಸಮೀಪ ಸಂಭವಿಸಿದ ಸ್ಫೋಟಕ್ಕೆ ಯೋಜನೆ ರೂಪಿಸುವ ಜೊತೆಗೆ ಆರ್ಥಿಕ ನೆರವು ನೀಡಿದ್ದರು’ ಎಂದು ಎನ್ಐಎ ತಿಳಿಸಿದೆ.
ಸ್ಫೋಟಕ್ಕೆ ಬಳಕೆಯಾದ ಕಾರು ಜಸೀರ್ ಬಿಲಾಲ್ ವಾನಿ ಹೆಸರಿನಲ್ಲಿ ನೋಂದಣಿಯಾಗಿತ್ತು. ಬಾಂಬ್ ತಯಾರಿಕೆಗೆ ತಾಂತ್ರಿಕ ನೆರವು ನೀಡಿದ ಆರೋಪದ ಅಡಿಯಲ್ಲಿ ಅಮೀರ್ ರಷೀದ್ ಅಲಿಯನ್ನು ಎನ್ಐಎಈ ಹಿಂದೆಯೇ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.