ವಿಜಯವಾಡ: ದೇಶದಲ್ಲಿ ಗೂಢಚರ್ಯೆ ಚಟುವಟಿಕೆ ನಡೆಸಲು ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್ಐ ಪರ ಹಣ ಸಂಗ್ರಹಿಸಿರುವ ಆರೋಪ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶುಕ್ರವಾರ ಪೂರಕ ಚಾರ್ಜ್ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್ನ ಗೋಧ್ರಾ ನಿವಾಸಿ ಇಮ್ರಾನ್ ಯಾಕೂಬ್ ಗೀತೇಲಿ ವಿರುದ್ಧ ಮೊದಲ ಪೂರಕ ಚಾರ್ಜ್ಶೀಟ್ ಅನ್ನು ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆಂಧ್ರಪ್ರದೇಶದ ವಿಜಯವಾಡದ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಐಎಸ್ಐ ಏಜೆಂಟ್ ಆಗಿ ಪಿತೂರಿ ನಡೆಸಿದ ಸಂಬಂಧ 2019ರ ನವೆಂಬರ್ನಲ್ಲಿ ವಿಜಯವಾಡದಲ್ಲಿ ಐಪಿಸಿ, ಯುಎಪಿಎ ಮತ್ತು ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ರಾಷ್ಟ್ರೀಯ ತನಿಖಾ ಸಂಸ್ಥೆ ಈ ಪ್ರಕರಣವನ್ನು 2019ರ ಡಿಸೆಂಬರ್ನಲ್ಲಿ ಮರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗೀತೇಲಿ ಬಟ್ಟೆ ವ್ಯಾಪಾರದ ಸೋಗಿನಲ್ಲಿ, ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸುತ್ತಿದ್ದ. ಪಾಕಿಸ್ತಾನಿ ಏಜೆಂಟರೊಂದಿಗೆ ಸಂಪರ್ಕದಲ್ಲಿದ್ದು, ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಏಜೆಂಟರನ್ನು ಭೇಟಿಯಾಗುತ್ತಿದ್ದ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಐಎಸ್ಐ ಏಜೆಂಟರ ಸೂಚನೆಯ ಮೇರೆಗೆ ಗೀತೇಲಿ ಸೂಕ್ಷ್ಮ ಮತ್ತು ಕಾರ್ಯತಂತ್ರದ ಮಾಹಿತಿಗಳನ್ನು ನೌಕಾಪಡೆಯ ಸಿಬ್ಬಂದಿಯಿಂದ ಪಡೆದುಕೊಂಡು, ಅವರ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.