ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ
ಚೆನ್ನೈ: ಉಚ್ಛಾಟಿತ ನಾಯಕ ಒ ಪನ್ನೀರ್ ಸೆಲ್ವಂ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.
ಎಐಎಡಿಎಂಕೆಗೆ ಮರಳಲು ಸಿದ್ದ ಎಂದು ಶನಿವಾರ ಪನ್ನೀರ್ ಸೆಲ್ವಂ ಅವರು ಇಂಗಿತ ವ್ಯಕ್ತಪಡಿಸಿದ್ದರು.
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ 77ನೇ ಜನ್ಮದಿನದ ಪೂರ್ವಭಾಗಿಯಾಗಿ ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆದಿರುವ ಪಳನಿಸ್ವಾಮಿ ಅವರು, ತೋಳ ಮತ್ತು ಕುರಿಗಳು ಸಹಬಾಳ್ವೆಯಿಂದಿರಲು ಸಾಧ್ಯವೇ ಎಂದು ಕೇಳಿದ್ದಾರೆ.
‘ತೋಳ ಮತ್ತು ಕುರಿಗಳು ಒಟ್ಟಿಗೆ ಬಾಳಲು ಸಾಧ್ಯವೆ? ಕಳೆ ಮತ್ತು ಬೆಳೆ ಎರಡು ಫಸಲಿನ ಭಾಗವಾಗಲು ಸಾಧ್ಯವೆ? ಒಬ್ಬ ನಿಷ್ಠಾವಂತ ಮತ್ತು ಒಬ್ಬ ದೇಶದ್ರೋಹಿ ಒಟ್ಟಾಗಿ ನಿಲ್ಲಲ್ಲು ಸಾಧ್ಯವೇ? ಇಲ್ಲ ಎಂಬ ನಿಮ್ಮ ಮಾತು ನನಗೆ ಕೇಳಿದೆ’ ಎಂದು ಹೇಳಿದ್ದಾರೆ.
ಆ ಮೂಲಕ ಪನ್ನೀರ್ ಸೆಲ್ವಂ ಅವರಿಗೆ ಎಐಎಡಿಎಂಕೆಯಲ್ಲಿ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಎಐಎಡಿಎಂಕೆ ಮರಳಲು ಸಿದ್ದರಿರುವುದಾಗಿ ಹೇಳಿದ್ದ ಪನ್ನೀರ್ ಸೆಲ್ವಂ, ಪಕ್ಷದ ಪ್ರಧಾನ ಕಾರ್ಯದರ್ಶಿ ಯಾರಾಗಬೇಕೆಂಬುವುದನ್ನು ಪಕ್ಷದ ಕಾರ್ಯಕರ್ತರೇ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.
‘ಯಾವುದೇ ಷರತ್ತುಗಳಿಲ್ಲದೇ ನಾನು, ಟಿಟಿವಿ ದಿನಕರನ್ ಮತ್ತು ಶಶಿಕಲ ಅವರು ಎಐಎಡಿಎಂಕೆಗೆ ಮರಳಲು ಸಿದ್ದರಿದ್ದೇವೆ. ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೇವೆ’ ಎಂದು ಹೇಳಿದ್ದರು.
ಎಐಎಡಿಎಂಕೆ 2011ರಿಂದ 2021ರವರೆಗೆ 10 ವರ್ಷಗಳ ಕಾಲ ತಮಿಳುನಾಡಿನ ಚುಕ್ಕಾಣಿ ಹಿಡಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.