ADVERTISEMENT

ಕಾಂಗ್ರೆಸ್‌ ಮೂಲ ಸಮಸ್ಯೆಗಳಿಗೆ ತ್ವರಿತಗತಿಯ ಪರಿಹಾರವಿಲ್ಲ: ಪ್ರಶಾಂತ್ ಕಿಶೋರ್‌

ಪಿಟಿಐ
Published 8 ಅಕ್ಟೋಬರ್ 2021, 10:39 IST
Last Updated 8 ಅಕ್ಟೋಬರ್ 2021, 10:39 IST
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್   

ನವದೆಹಲಿ: ‘ಕಾಂಗ್ರೆಸ್‌ ಪಕ್ಷದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಹುಡುಕಲು ಸಾಧ್ಯವಿಲ್ಲ‘ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟ್ವೀಟ್‌ ಮಾಡಿದ್ದಾರೆ.

ಪ್ರಶಾಂತ್ ಕಿಶೋರ್ ಅವರ ಈ ಸಂದೇಶ, ಲಖಿಂಪುರ–ಖೇರಿಯ ಘಟನೆಯ ನಂತರ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್‌ ಪಕ್ಷವನ್ನು ತ್ವರಿತಗತಿಯಲ್ಲಿ ಪುನಶ್ಚೇತನಗೊಳಿಸಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮೂಡಿಸಿದೆ.

ಪ್ರಶಾಂತ್ ಕಿಶೋರ್‌ ಅವರು ಕಾಂಗ್ರೆಸ್‌ ಸೇರಲು ಸಜ್ಜಾಗಿದ್ದು, ಈ ಸಂಬಂಧ ಸೋನಿಯಾ ಗಾಂಧಿ ಮತ್ತು ಕುಟುಂಬದವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ವದಂತಿಗಳು ಕೇಳಿಬಂದ ಹಿನ್ನೆಲೆಯಲ್ಲಿ, ಕಿಶೋರ್ ಅವರು ಈ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಲಖಿಂಪುರ ಖೇರಿ ಘಟನೆಯ ಆಧಾರದ ಮೇಲೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ತ್ವರಿತಗತಿಯಲ್ಲಿ, ದಿಢೀರನೇ ಪುನಶ್ಚೇತನಗೊಳ್ಳಬಹುದು ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಈ ಮೂಲಕ ತಮ್ಮನ್ನು ತಾವೇ ನಿರಾಸೆಗೆ ದೂಡಿ ಕೊಳ್ಳುತ್ತಿದ್ದಾರೆ‘ ಎಂದು ಕಿಶೋರ್ ಟ್ವೀಟ್‌ ಮಾಡಿದ್ದಾರೆ.

‘ದುರದೃಷ್ಟವಶಾತ್ ಪಕ್ಷದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ಮತ್ತು ರಚನಾತ್ಮಕ ದೌರ್ಬಲ್ಯಗಳಿಗೆ ಯಾವುದೇ ತ್ವರಿತ ಪರಿಹಾರಗಳಿಲ್ಲ‘ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕಳೆದ ತಿಂಗಳು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಪ್ರಶಾಂತ್ ಕಿಶೋರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸುವವರು ಸುಧಾರಣಾ ವಿರೋಧಿಗಳು’ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.