ನವದೆಹಲಿ: ಪೆಗಾಸಸ್ ಗೂಢಚರ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು ನೀಡಿದೆ. ಇದರಲ್ಲಿ, ಆಡಳಿತ ಪಕ್ಷ ಅಥವಾ ಮೋದಿ ಸರ್ಕಾರದ ಪಾತ್ರವಿದೆ ಎಂದು ಹೇಳುವುದಕ್ಕೆ ಒಂದು ‘ಚಿಕ್ಕ ಸಾಕ್ಷಿ’ಯೂ ಇಲ್ಲ ಎಂದು ಬಿಜೆಪಿ ಹೇಳಿದೆ.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ರವಿಶಂಕರ್ ಪ್ರಸಾದ್, ಈ ಸುದ್ದಿ ಪ್ರಕಟಿಸಿದವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು. ಭಾರತದಲ್ಲಿ ಈ ಸುದ್ಧಿಯನ್ನು ಬ್ರೇಕ್ ಮಾಡಿದ ಸುದ್ದಿ ಪೋರ್ಟಲ್ ‘ದಿ ವೈರ್’ ಈ ಹಿಂದೆ ಹಲವು ತಪ್ಪು ಸುದ್ದಿಗಳನ್ನು ನೀಡಿದ ಇತಿಹಾಸವಿದೆ ಎಂದು ಟೀಕಿಸಿದ್ದಾರೆ.
ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಆಗ್ರಹವನ್ನು ತಳ್ಳಿಹಾಕಿದ ಅವರು, ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಮತ್ತಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂದು ಅವರು ಆರೋಪಿಸಿದ್ದಾರೆ.
ಆಧಾರರಹಿತ ಆರೋಪ ಮಾಡುವ ಮೂಲಕ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ ಅಜೆಂಡಾ ಇದರಲ್ಲಿದೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದರು.
‘ಬಿಜೆಪಿ ವಿರುದ್ಧ ಕಾಂಗ್ರೆಸ್ ಎತ್ತಿರುವ ರಾಜಕೀಯ ಉದ್ದೇಶಿತ ಟೀಕೆಗಳನ್ನು ಪಕ್ಷವು ಬಲವಾಗಿ ನಿರಾಕರಿಸುತ್ತದೆ ಮತ್ತು ಖಂಡಿಸುತ್ತದೆ. ಇದು 50 ವರ್ಷ ಭಾರತವನ್ನು ಆಳಿದ ಪಕ್ಷವೊಂದರ ಹೊಸ ಕೀಳುಮಟ್ಟವಾಗಿದೆ’ ಎಂದು ರವಿಶಂಕರ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಕಾನೂನಿನ ಅಡಿಯಲ್ಲಿ ಯಾವುದೇ ರೀತಿಯ ಅಕ್ರಮ ಕಣ್ಗಾವಲು ಸಾಧ್ಯವಿಲ್ಲ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಸ್ಪಷ್ಟಪಡಿಸಿರುವುದಾಗಿ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.