ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಬ್ರಿಟನ್ ಸಂದರು ಚರ್ಚೆ ನಡೆಸಿರುವುದನ್ನು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಖಂಡಿಸಿದೆ.
‘ಬ್ರಿಟನ್ ಸಂಸದರ ಚರ್ಚೆಯು ಏಕಪಕ್ಷೀಯವಾಗಿದ್ದುದಲ್ಲದೆ ಸುಳ್ಳು ಪ್ರತಿಪಾದನೆಗಳಿಂದ ಕೂಡಿತ್ತು. ಸಮತೋಲಿತ ಚರ್ಚೆ ನಡೆಸುವ ಬದಲು ಸುಳ್ಳು ಪ್ರತಿಪಾದನೆಗಳು, ದೃಢೀಕೃತವಲ್ಲದ ಅಂಶಗಳೇ ಮುಖ್ಯವಾಗಿದ್ದುದಕ್ಕೆ ವಿಷಾದಿಸುತ್ತೇವೆ’ ಎಂದು ಹೈಕಮಿಷನರ್ ಕಚೇರಿ ಪ್ರಕಟಣೆ ತಿಳಿಸಿದೆ.
ಬ್ರಿಟನ್ ಸಂಸತ್ನ ಆರವರಣದಲ್ಲಿ ಚರ್ಚೆ ನಡೆದಿತ್ತು. ಬಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಚರ್ಚೆ ನಡೆಸುವಂತೆ 1 ಲಕ್ಷಕ್ಕೂ ಹೆಚ್ಚು ಸಹಿಯುಳ್ಳ ಇ–ಅರ್ಜಿ ಸಲ್ಲಿಕೆಯಾಗಿತ್ತು. ಇದಕ್ಕೆ ಪ್ರತಿಯಾಗಿ ಸಂಸದರ ಸಭೆ ನಡೆದಿದೆ. ಇದನ್ನು ‘ಹೌಸ್ ಆಫ್ ಕಾಮನ್ಸ್ ಸಮಿತಿ’ಯು ಇನ್ನಷ್ಟೇ ಅನುಮೋದಿಸಬೇಕಿದೆ.
ಕೃಷಿ ಕಾಯ್ದೆಗಳು ಭಾರತ ಸರ್ಕಾರದ ಆಂತರಿಕ ವಿಷಯ ಎಂಬುದನ್ನು ಹೈಕಮಿಷನರ್ ಕಚೇರಿ ಈಗಾಗಲೇ ಬ್ರಿಟನ್ ಆಡಳಿತಕ್ಕೆ ತಿಳಿಸಿತ್ತು. ಇದೀಗ ಆ ವಿಚಾರವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.