ಹುತಾತ್ಮ ಯೋಧ ಮುದಾವತ್ ಮುರಳಿ ನಾಯಕ್
ಚಿತ್ರ ಕೃಪೆ: ಎಕ್ಸ್
ಆಂಧ್ರಪ್ರದೇಶ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ, ಮುದಾವತ್ ಮುರಳಿ ನಾಯಕ್ (23) ಅವರ ಮೃತದೇಹ ಹುಟ್ಟೂರಿಗೆ ತಲುಪಿದೆ.
23ರ ಯುವ ಯೋಧ ನಾಯಕ್ ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಕಲ್ಲಿ ತಾಂಡಾ ಗ್ರಾಮದವರು. ಇವರು ಅಗ್ನಿವೀರ ಯೋಧರಾಗಿದ್ದರು. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆಯೊಂದಿಗೆ ಗುಂಡಿನ ಕಾಳಗ ನಡೆಸುವಾಗ ಮೃತಪಟ್ಟಿದ್ದರು.
ನಾಯಕ್ ಅವರ ಮೃತದೇಹ ಹುಟ್ಟೂರಿಗೆ ತೆರಳುವಾಗ ದಾರಿಯುದ್ದಕ್ಕೂ ನೂರಾರು ಜನ ನಿಂತು ಹುತಾತ್ಮ ಯೋಧನಿಗೆ ಕಂಬನಿಯ ವಿದಾಯ ಹೇಳಿದರು. ‘ಭಾರತ್ ಮಾತಾ ಕಿ ಜೈ’, ‘ಮುರಳಿ ನಾಯಕ್ ಅಮರ್ ರಹೇ’ ಎಂಬ ಘೋಷಣೆಗಳು ಮೊಳಗಿದ್ದವು.
ಮೃತದೇಹ ಮನೆಗೆ ತೆರಳುತ್ತಿದ್ದಂತೆ ನಾಯಕ್ ಅವರ ತಾಯಿ ಜ್ಯೋತಿ ಬಾಯಿ ಸೇರಿದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು, ದುಃಖದ ಮಡುವಿನಲ್ಲೂ ‘ವಂದೇ ಮಾತರಂ’ ಎನ್ನುವ ಘೋಷದ ಮೂಲಕ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದು, ನೆರೆದವರ ಕಣ್ಣಾಲಿಗಳನ್ನು ತುಂಬಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.