ADVERTISEMENT

'ಆಪರೇಷನ್ ಸಿಂಧೂರ' ಮುಂದುವರಿದಿದೆ: ಪಾಕ್‌‍ಗೆ ಸೇನಾ ಮುಖ್ಯಸ್ಥರಿಂದ ಸ್ಪಷ್ಟ ಸಂದೇಶ

ದುಸ್ಸಾಹಸ ತೋರಿದರೆ ತಕ್ಕ ತಿರುಗೇಟು : ಸೇನಾ ಮುಖ್ಯಸ್ಥ ದ್ವಿವೇದಿ ಎಚ್ಚರಿಕೆ

ಪಿಟಿಐ
Published 13 ಜನವರಿ 2026, 10:43 IST
Last Updated 13 ಜನವರಿ 2026, 10:43 IST
<div class="paragraphs"><p>ಉಪೇಂದ್ರ ದ್ವಿವೇದಿ</p></div>

ಉಪೇಂದ್ರ ದ್ವಿವೇದಿ

   

ನವದೆಹಲಿ: ಆಪರೇಷನ್‌ ಸಿಂಧೂರ ಇನ್ನೂ ಜಾರಿಯಲ್ಲಿಯೇ ಇದೆ. ಎದುರಾಳಿಗಳು ದುಸ್ಸಾಹಸ ತೋರಿದರೆ ಅದಕ್ಕೆ ತಕ್ಕ ತಿರುಗೇಟು ನೀಡಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರು ಮಂಗಳವಾರ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ದ್ವಿವೇದಿ,‘ ಆಪರೇಷನ್‌ ಸಿಂಧೂರದ ಮೂಲಕ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿ, ಅಣ್ವಸ್ತ್ರದ ಬಗ್ಗೆ ಇಸ್ಲಾಮಾಬಾದ್‌ಗೆ ಇದ್ದ ಒಣಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿದ್ದೇವೆ. ಇದರಿಂದ ಕಾರ್ಯತಂತ್ರದ ವ್ಯಾಖ್ಯಾನದ ಬಗೆಗೆ ಇದ್ದ ದೃಷ್ಟಿಕೋನ ಬದಲಿಸಲು ಸಾಧ್ಯವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಭಾರತದ ದಿಟ್ಟ ಪ್ರತಿಕ್ರಿಯೆ, ಕಾರ್ಯತಂತ್ರದ ಸ್ಪಷ್ಟತೆಯನ್ನು ಇದು ಪ್ರದರ್ಶಿಸುತ್ತದೆ’ ಎಂದಿದ್ದಾರೆ. 

ಇದೇ ವೇಳೆ ಭಾರತ–ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಕುರಿತು ಮಾಹಿತಿ ನೀಡಿ, ‘ಎಲ್‌ಎಸಿ ಬಳಿ ಪರಿಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ, ನಿರಂತರ ಮೇಲ್ವಿಚಾರಣೆ ನಡೆಸುವ ಅಗತ್ಯವಿದೆ. ಒಪ್ಪಂದಗಳ ನವೀಕರಣ ಹಾಗೂ ವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಪರಿಸ್ಥಿತಿ ಸಹಜವಾಗಿರಲು ಸಹಕಾರಿಯಾಗಿವೆ’ ಎಂದೂ ತಿಳಿಸಿದ್ದಾರೆ. 

ಜತೆಗೆ ಜಮ್ಮು–ಕಾಶ್ಮೀರದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿಯೇ ಇದ್ದರೂ ನಿಯಂತ್ರಣದಲ್ಲಿದೆ ಎಂದೂ ಅವರು ಹೇಳಿದ್ದಾರೆ.

ಶೋಧ: ಗುಂಡಿನ ಮೊರೆತದ ಸದ್ದು

ಜಮ್ಮು: ಜಮ್ಮು–ಕಾಶ್ಮೀರದ ಕಠುವಾ ಜಿಲ್ಲೆಯ ಕುಗ್ರಾಮಗಳಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದಂತೆಯೇ ಭದ್ರತಾ ಪಡೆಗಳು ಮಂಗಳವಾರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಇದಾಗುತ್ತಿದ್ದಂತೆಯೇ ಗುಂಡಿನ ಮೊರೆತದ ಸದ್ದು ಕೇಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಲಾವರದ ನಜೋತೆ ಅರಣ್ಯ ಪ್ರದೇಶದಲ್ಲಿ ಗುಂಡಿನ ಮೊರೆತ ಕೇಳಿಸಿದೆ. ಈ ಪ್ರದೇಶವು ಜನವರಿ 7ರಂದು ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದ ಕಹೋಗ್‌ ಅರಣ್ಯ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿದೆ ಎಂದೂ ಮಾಹಿತಿ ನೀಡಿದ್ದಾರೆ. 

ಭದ್ರತಾ ಸಿಬ್ಬಂದಿ ಶೋಧ ನಡೆಸುತ್ತಿರುವುದನ್ನ ತಿಳಿದು ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.  ಜ.7ರಂದು ನಡೆದಿದ್ದ ಕಾರ್ಯಾಚರಣೆಯಲ್ಲಿ ಕತ್ತಲೆಯಿದ್ದ ಪರಿಣಾಮ ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದೂ ಅಧಿಕಾರಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.