ADVERTISEMENT

ಸಂಸತ್ತೇ ಸರ್ವೋಚ್ಚ: ಧನಕರ್ ಹೇಳಿಕೆಗೆ ಕಾಂಗ್ರೆಸ್, ಸಿಪಿಎಂ, ಆರ್‌ಜೆಡಿ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 14:49 IST
Last Updated 12 ಜನವರಿ 2023, 14:49 IST
ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್
ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್   

ನವದೆಹಲಿ: ‘ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತರಬಹುದು, ಅದರ ಮೂಲ ಆಶಯಗಳಿಗಲ್ಲ’ ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಆಕ್ಷೇಪಿಸಿ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ಈ ತೀರ್ಪು ಪ್ರಶ್ನಿಸಿದ್ದ ಧನಕರ್‌ ಅವರು, ‘ಸುಪ್ರೀಂ ಕೋರ್ಟ್‌ನ ತೀರ್ಪು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಿದೆ, ಇದನ್ನು ತಾವು ಒಪ್ಪುವುದಿಲ್ಲ. ಸಂಸತ್ತು ಎಂದಿಗೂ ಸರ್ವೋಚ್ಚವಾದುದು’ ಎಂದು ಹೇಳಿದ್ದರು.

ಕೇಶವಾನಂದ ಭಾರತಿ ತೀರ್ಪು ಕುರಿತಂತೆ ಸುಪ್ರೀಂ ಕೋರ್ಟ್‌ ಈಚೆಗೆ ಮೇಲಿನಂತೆ ನಿಲುವು ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಪಕ್ಷವು ಧನಕರ್‌ರ ಈ ಹೇಳಿಕೆಯನ್ನು ‘ನ್ಯಾಯಾಂಗದ ಮೇಲಿನ ದಾಳಿ’ ಎಂದು ವ್ಯಾಖ್ಯಾನಿಸಿದೆ.

ADVERTISEMENT

ಕಾಂಗ್ರೆಸ್‌ನ ಜೈರಾಂ ರಮೇಶ್, ಮನೋಜ್ ತಿವಾರಿ ಹೇಳಿಕೆಯನ್ನು ಖಂಡಿಸಿದ್ದರೆ, ಪಿ.ಚಿದಂಬರಂ ಅವರು, ‘ಈ ಮೂಲಕ ಧನ್‌ಕರ್ ಅವರು ಜನತೆಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಸಂವಿಧಾನವನ್ನು ಪ್ರೀತಿಸುವ ಎಲ್ಲರೂ ಈ ಕುರಿತು ಜಾಗೃತರಾಗಿರಬೇಕು. ಸಂಸತ್ತು ಅಲ್ಲ, ಸಂವಿಧಾನವೇ ಸರ್ವೋಚ್ಛವಾದುದು’ ಎಂದು ಹೇಳಿದ್ದಾರೆ.

ಸಿಪಿಎಂ ಹಿರಿಯ ಮುಖಂಡ, ಕೇರಳದ ಮಾಜಿ ಹಣಕಾಸು ಸಚಿವ ಟಿ.ಎಂ.ಥಾಮಸ್‌ ಐಸ್ಯಾಕ್‌ ಅವರು, ಧನಕರ್ ಹೇಳಿಕೆಯು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ಎಂದು ಟೀಕಿಸಿದ್ದಾರೆ.

ಆರ್‌ಜೆಡಿ ಪಕ್ಷದ ಸಂಸದ ಮನೋಜ್‌ ಕೆ.ಝಾ ಅವರು, ಧನಕರ್ ಅವರ ಹೇಳಿಕೆಯು ಕೇಶವಾನಂದ ಭಾರತಿ ತೀರ್ಪಿನ ಒಟ್ಟು ಆಶಯಗಳಿಗೇ ವಿರುದ್ಧವಾದುದಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.