ADVERTISEMENT

ಶ್ರೀನಗರ: ನಾಗರಿಕರ ಹತ್ಯೆ ಪ್ರಕರಣದಲ್ಲಿ 400 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 12:31 IST
Last Updated 10 ಅಕ್ಟೋಬರ್ 2021, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಸಂಪರ್ಕ ಹೊಂದಿದ ಆರೋಪದಲ್ಲಿ400ಕ್ಕೂ ಹೆಚ್ಚು ಶಂಕಿತರನ್ನು ಭದ್ರತಾ ಪಡೆಗಳು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಶ್ರೀನಗರದಲ್ಲಿ ಇತ್ತೀಚಿಗೆ ನಡೆದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣ ಸಂಬಂಧ ಭದ್ರತಾ ಸಂಸ್ಥೆಗಳು ಶಿಸ್ತುಕ್ರಮ ಕೈಗೊಳ್ಳಲು ಆರಂಭಿಸಿವೆ. ಕೆಲವು ಕಾಶ್ಮೀರಿ ಪಂಡಿತರು ಮತ್ತು ಒಬ್ಬ ಸಿಖ್‌ ಶಿಕ್ಷಕ ಸೇರಿದಂತೆ ಸರಣಿ ಹತ್ಯೆಗಳನ್ನು ನಡೆಸಿದ ದಿ ರೆಸಿಸ್ಟೆನ್ಸ್‌ ಫ್ರಂಟ್‌ (ಟಿಆರ್‌ಎಫ್‌) ಉಗ್ರರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

‘ಶಂಕಿತ ಪಟ್ಟಿಯಲ್ಲಿರುವ ಜಮ್ಮು–ಕಾಶ್ಮೀರದ ಜಮಾತ್‌–ಇಸ್ಲಾಮಿ, ತೆಹ್ರೀಕ್‌–ಇ–ಹುರಿಯತ್‌ ಉಗ್ರ ಸಂಘಟನೆಯ ಸದಸ್ಯರು ಮತ್ತು ದಾಳಿಕೋರರನ್ನು ಬಂಧಿಸಲಾಗಿದೆ. ತನಿಖೆಗೆ ಅಡಚಣೆ ಉಂಟುಮಾಡುವ ದಾಳಿಗಳನ್ನು ತಡೆಯಲು ಈ ಬಂಧನ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಸುಮಾರು 70 ಜನರನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ. ಅಲ್ಲಿ ಹೆಚ್ಚು ನಾಗರಿಕ ಹತ್ಯೆ ಪ್ರಕರಣಗಳು ವರದಿಯಾಗಿವೆ. ಟಿಆರ್‌ಎಫ್‌ ಮುಖ್ಯಸ್ಥ ಅಬ್ಬಾಸ್ ಶೇಖ್‌ ನಗರದಲ್ಲಿ ಹಲವು ಹತ್ಯೆ ನಡೆಸಿದ್ದ. ಈತ ಕಳೆದ ತಿಂಗಳು ಶ್ರೀನಗರದ ಅಲೌಚಿಬಾಗ್‌ ಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ’ ಎಂದೂ ಮೂಲಗಳು ಮಾಹಿತಿ ನೀಡಿವೆ.

ಪಾಕಿಸ್ತಾನ ಮೂಲದ ಲಷ್ಕರ್‌–ಎ–ತೊಯಬಾದ ಒಂದು ಭಾಗವಾಗಿರುವ ಟಿಆರ್‌ಎಫ್‌ ನಗರದಲ್ಲಿ ನಡೆದ ಹೆಚ್ಚಿನ ದಾಳಿಗಳ ಹೊಣೆ ಹೊತ್ತಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.