ಅಸಾದುದ್ದೀನ್ ಓವೈಸಿ
ಹೈದರಾಬಾದ್: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ಧೀನ್ ಓವೈಸಿ ಮುಂದಡಿ ಇಟ್ಟಿದ್ದಾರೆ.
ಬಿಹಾರದಲ್ಲಿ ಸೆ. 24ರಿಂದ ಮೂರು ದಿನಗಳವರೆಗೆ ಚುನಾವಣೆ ಪ್ರಚಾರ ನಡೆಸಲಿದ್ದಾರೆ.
ಸೆ. 24ರಂದು ಅಸಾದುದ್ಧೀನ್ ಓವೈಸಿ ಅವರು ಕಿಶನ್ಗಂಜ್ನಿಂದ ‘ಸೀಮಾಂಚಲ್ ನ್ಯಾಯ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. ಸೀಮಾಂಚಲ್ ಪ್ರದೇಶದಲ್ಲಿ ಮೂರು ದಿನ ಕಾಲ ನ್ಯಾಯ ಯಾತ್ರೆ ನಡೆಯಲಿದೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.
ಯಾತ್ರೆಯ ಸಮಯದಲ್ಲಿ ಓವೈಸಿ ಅವರು ಸೀಮಾಂಚಲ್ನ 25ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮತ್ತು ಕಾರ್ನರ್ ಸಭೆಗಳನ್ನು ನಡೆಸಲಿದ್ದಾರೆ ಎಂದು ಎಐಎಂಐಎಂ ಮಂಗಳವಾರ ತಿಳಿಸಿದೆ.
ಅಭಿವೃದ್ಧಿಗಾಗಿ ಜನರನ್ನು ಒಂದುಗೂಡಿಸಲು ಮತ್ತು ಸೀಮಾಂಚಲ್ಗೆ ನ್ಯಾಯ ಒದಗಿಸಲು ಯಾತ್ರೆ ನಡೆಸುತ್ತಿರುವುದಾಗಿ ಪಕ್ಷ ಹೇಳಿಕೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೀಮಾಂಚಲ್ನ 25 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಹಿಂದುಳಿದಿರುವ ಸೀಮಾಂಚಲ್ನ ಅಭಿವೃದ್ಧಿಗಾಗಿ ಸಂವಿಧಾನದ 371ನೇ ವಿಧಿಯಡಿ ‘ಸೀಮಾಂಚಲ್ ಅಭಿವೃದ್ಧಿ ಮಂಡಳಿ‘ ಸ್ಥಾಪಿಸುವಂತೆ ಓವೈಸಿ ಲೋಕಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.