ಅಬ್ದುಲ್ ರೌಫ್ ಅಜರ್
(ಚಿತ್ರ ಕೃಪೆ: X/@BJP4India)
ನವದೆಹಲಿ: ಸಂಸತ್ ಮೇಲಿನ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಬೇಕಾಗಿದ್ದ ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಉಗ್ರ ಅಬ್ದುಲ್ ರವೂಫ್ ಅಜರ್, ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ ಎಂದು ಬಿಜೆಪಿ ಗುರುವಾರ ಹೇಳಿದೆ.
ರವೂಫ್, ಜೆಇಎಂ ಸ್ಥಾಪಕ ಮೌಲಾನಾ ಮಸೂದ್ ಅಜರ್ನ ಸಹೋದರ ಎಂದು ವರದಿಯಾಗಿದೆ. ಅಜರ್ನ ಅನುಪಸ್ಥಿತಿಯಲ್ಲಿ ನಿಷೇಧಿತ ಸಂಘಟನೆಯ ನೇತೃತ್ವ ವಹಿಸಿದ್ದ ಎನ್ನಲಾಗಿದೆ.
‘ಮೋಸ್ಟ್ ವಾಂಟೆಡ್’ ಭಯೋತ್ಪಾದಕ ಅಬ್ದುಲ್ ರವೂಫ್ ಅಜರ್ ಭಾರತೀಯ ಸೇನೆಯ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಬಿಜೆಪಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಬಹಾವಲ್ಪುರದಲ್ಲಿರುವ ಜೈಷ್-ಎ-ಮೊಹಮ್ಮದ್ ಕೇಂದ್ರ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಬಲಿಯಾದ ಮಸೂದ್ ಅಜರ್ನ ಕುಟುಂಬದ 10 ಸದಸ್ಯರಲ್ಲಿ ಈತನೂ ಒಬ್ಬ ಎಂದಿದೆ.
2001ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿ ಅಲ್ಲದೆ, ಕಂದಹಾರ್ ವಿಮಾನ ಅಪಹರಣ ಮತ್ತು ಪಠಾಣ್ಕೋಟ್ ಭಯೋತ್ಪಾದಕ ದಾಳಿಯಲ್ಲಿಯೂ ರವೂಫ್ ಭಾಗಿಯಾಗಿದ್ದ.
ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಆಪ್ತರು ಸೇರಿದಂತೆ 14 ಮಂದಿ ಸತ್ತಿರುವುದನ್ನು ಮಸೂದ್ ಅಜರ್ ಕೂಡ ಖಚಿತಪಡಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.