ಶೆಲ್ ದಾಳಿಯಲ್ಲಿ ಹಾನಿಗೀಡಾದ ಪೂಂಚ್ ಜಿಲ್ಲೆಯ ಮನೆ
ನವದೆಹಲಿ: ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ಕ್ಕೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯ ಪ್ರಯತ್ನದಲ್ಲಿ ಹಾನಿಗೀಡಾದ ಮನೆಗಳಿಗೆ ಹೆಚ್ಚುವರಿಯಾಗಿ ₹2 ಲಕ್ಷ ನೀಡಲು ಕೇಂದ್ರ ಸರ್ಕಾರ ಶುಕ್ರವಾರ ನಿರ್ಧರಿಸಿದೆ.
ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು. ಮೇ 7ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಉಗ್ರರ ಕೆಲವು ನೆಲೆಗಳು ಹಾಗೂ ನೂರಾರು ಭಯೋತ್ಪಾದಕರನ್ನ ಹತ್ಯೆಗೈದಿತ್ತು.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ಭಾರತವನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಿತ್ತು. ಬಾರಾಮುಲ್ಲಾ, ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಯಲ್ಲಿ ನೆಲೆಸಿರುವ ಗಡಿ ಭಾಗದಲ್ಲಿರುವ ಹಲವು ಭಾರತೀಯರ ಮನೆಗಳಿಗೆ ಹಾನಿಯುಂಟು ಮಾಡಿತ್ತು. ಇದಕ್ಕೆ ಈ ಮೊದಲು ಪ್ರತಿ ಮನೆಗೆ ₹1.3 ಲಕ್ಷದಂತೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿತ್ತು. ಇದು ಗರಿಷ್ಠ ನಷ್ಟ ಅನುಭವಿಸಿದ ಮನೆಗಳಿಗೆ ಮಾತ್ರ. ಆದರೆ ಆಗಿರುವ ಹಾನಿಗೆ ಈ ಪರಿಹಾರ ಎಳ್ಳಷ್ಟೂ ಸಾಕಾಗದು ಎಂಬ ಕೂಗು ಕೇಳಿಬಂದಿತ್ತು.
ಇದೀಗ ಹೆಚ್ಚುವರಿಯಾಗಿ ಅತಿ ಹೆಚ್ಚು ಹಾನಿಗೀಡಾದ ಮನೆಗಳಿಗೆ ₹2 ಲಕ್ಷ ಹೆಚ್ಚುವರಿ ಪರಿಹಾರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡಲಾಗುವುದು ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.