ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಆದಿಲ್ ಶಾ ಅವರ ಕುಟುಂಬದವರನ್ನು ಶನಿವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು
ಶ್ರೀನಗರ: ಕಾಶ್ಮೀರ ಪಹಲ್ಗಾಮ್ನಲ್ಲಿ ಏ. 22ರಂದು ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಆದಿಲ್ ಶಾ ಎಂಬುವವರ ಪತ್ನಿಗೆ ಸರ್ಕಾರಿ ನೌಕರಿಯ ನೇಮಕಾತಿ ಪತ್ರ ನೀಡುವ ವಿಷಯದಲ್ಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಜಟಾಪಟಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಆದಿಲ್ ಶಾ ಅವರ ಪತ್ನಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್, ‘ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ನೀಡಿ ನೇಮಕಾತಿ ಪತ್ರವನ್ನು ಸರ್ಕಾರ ಆಗಲೇ ಸಿದ್ಧಪಡಿಸಿತ್ತು’ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಷಯ ಹಂಚಿಕೊಂಡಿರುವ ಪಕ್ಷದ ವಕ್ತಾರ ನ್ವೀರ್ ಸಾದಿಕ್, ‘ನೋವಿನ ಸಂದರ್ಭದಲ್ಲಿ ಅನುಕಂಪಕ್ಕೆ ದಾರಿ ಮಾಡಿಕೊಡಬೇಕು. ಸರ್ಕಾರ ಈ ಕೆಲಸವನ್ನು ಮಾಡಬೇಕು. ಸರ್ಕಾರವು ಮೀನುಗಾರಿಕೆ ಇಲಾಖೆಯಲ್ಲಿ ಮೃತ ವ್ಯಕ್ತಿಯ ಮಡದಿಗೆ ನೌಕರಿ ನೀಡಿ ಆದೇಶ ಪತ್ರ ಸಿದ್ಧಪಡಿಸಿತ್ತು. ಚುನಾಯಿತ ಸರ್ಕಾರದ ಸಚಿವ ಜಾವೇದ್ ದಾರ್ ಅವರು ಇದನ್ನು ಸಿದ್ಧಪಡಿಸಿದ್ದರು. ಆ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ಹಸ್ತಾಂತರಿಸಿದ್ದು ಸಂತೋಷದ ಸಂಗತಿ’ ಎಂದಿದ್ದಾರೆ.
‘ನೌಕರಿ ನೀಡುವ ನಿರ್ಧಾರ ಕೈಗೊಂಡ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರಬುದ್ಧತೆ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಿದೆ. ಇದರಲ್ಲಿ ಸ್ವಪ್ರತಿಷ್ಠೆಗೆ ಜಾಗ ಮಾಡಿಕೊಡುವುದಿಲ್ಲ. ಇಂಥ ದುಃಖದ ಸಂದರ್ಭದಲ್ಲಿ ಆದಿಲ್ ಅವರ ಕುಟುಂಬದೊಂದಿಗೆ ಸರ್ಕಾರವಿದೆ’ ಎಂದು ಅವರು ಹೇಳಿದ್ದಾರೆ.
‘ಪೂಂಚ್ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬದರಿಗೆ ಕೆಲಸ ನೀಡಿ, ನೇಮಕಾತಿ ಪತ್ರವನ್ನು ಸರ್ಕಾರ ಹಸ್ತಾಂತರಿಸಿದೆ. ರಾಜ್ಯ ಗೃಹ ಸಚಿವ ಪತ್ರಗಳನ್ನು ಸಂಬಂಧಿಸಿದ ಕುಟುಂಬಗಳಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಅವರು ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಿ ನೌಕರಿ ನೀಡುವ ಭರವಸೆ ಕೊಟ್ಟಿದ್ದರು’ ಎಂದು ಸಾದಿಕ್ ಹೇಳಿದ್ದಾರೆ.
ಆದಿಲ್ ಪತ್ನಿ ಗುಲ್ನಾಜ್ ಅಖ್ತರ್ ಅವರನ್ನು ಹಪತ್ನಗರದಲ್ಲಿರುವ ಅವರ ಮನೆಯಲ್ಲಿ ಶನಿವಾರ ಭೇಟಿ ಮಾಡಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದರು. ‘ಪತಿಯ ಶೌರ್ಯದ ಸಂಕೇತವಾಗಿ ಅವರ ನೌಕರಿಯ ನೇಮಕಾತಿ ಪತ್ರವನ್ನು ಕೃತಜ್ಞತೆಯ ಭಾಗವಾಗಿ ಸರ್ಕಾರ ನೀಡಿದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.