ADVERTISEMENT

ನೆಹರೂ ತಪ್ಪಿನಿಂದಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೃಷ್ಟಿ: ಅಮಿತ್‌ ಶಾ

ಏಜೆನ್ಸೀಸ್
Published 22 ಸೆಪ್ಟೆಂಬರ್ 2019, 14:11 IST
Last Updated 22 ಸೆಪ್ಟೆಂಬರ್ 2019, 14:11 IST
   

ಮುಂಬೈ: ಸಮಯೋಚಿತವಲ್ಲದ ನಿರ್ಧಾರದೊಂದಿಗೆ ಪಕ್ಕದ ರಾಷ್ಟ್ರದೊಂದಿಗೆ ಕದನ ವಿರಾಮ ಘೋಷಿಸದೇ ಹೋಗಿದ್ದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಸೃಷ್ಟಿಯೇ ಆಗುತ್ತಿರಲಿಲ್ಲ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ.

ಭಾರತದೊಂದಿಗೆ ಕಾಶ್ಮೀರವನ್ನು ಒಗ್ಗೂಡಿಸದ ವಿಚಾರವಾಗಿ ನೆಹರೂ ಅವರನ್ನು ಗುರಿಯಾಗಿಸಿ ಮಾತನಾಡಿದರು.'ಕಾಶ್ಮೀರದ ವಿಚಾರವನ್ನು ಆಗಿನ ಪ್ರಧಾನಿಗಿಂತಲೂ ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ನಿರ್ವಹಿಸಬೇಕಿತ್ತು' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ಕೇಂದ್ರದ ನಿರ್ಧಾರದ ಕುರಿತು ಹಾಗೂ ಮಹಾರಾಷ್ಟ್ರದಲ್ಲಿಮುಂದಿನ ತಿಂಗಳ ನಡೆಯಲಿರುವ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ನಡೆದ ರ‍್ಯಾಲಿಯಲ್ಲಿ ಅಮಿತ್‌ ಶಾ ಮಾತನಾಡಿದರು.'370 ವಿಧಿ ರದ್ದತಿಗಷ್ಟೇ ನಮ್ಮ ಕಾರ್ಯ ಪೂರ್ಣಗೊಂಡಿಲ್ಲ, ಈಗಷ್ಟೇ ನಮ್ಮ ಕೆಲಸ ಶುರುವಾಗುತ್ತದೆ' ಎಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.

'ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಅಧ್ಯಾಯದೊಂದಿಗೆ ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಗುರಿ' ಎಂದರು.

'370ನೇ ವಿಧಿ ರದ್ದತಿಯನ್ನು ಅವರು ನಾಚಿಕೆಯಿಲ್ಲದೆ ವಿರೋಧಿಸುತ್ತಿದ್ದಾರೆ' ಎಂದು ಕಾಂಗ್ರೆಸ್‌ ಮತ್ತು ಎನ್‌ಸಿಪಿ ವಿರುದ್ಧ ಗುಡುಗಿದರು.

'ಪಾಕಿಸ್ತಾನದೊಂದಿಗೆ ಸಮಯೋಚಿತವಲ್ಲದ ಕದನ ವಿರಾಮವನ್ನು ಘೋಷಿಸದೆ ಹೋಗಿದ್ದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೃಷ್ಟಿಯಾಗುತ್ತಲೇ ಇರಲಿಲ್ಲ. ಅದು ನೆಹರೂ ಮಾಡಿದ ತಪ್ಪು...ನೆಹರೂಗಿಂತಲೂ ಸರ್ದಾರ್‌ ಪಟೇಲ್‌ ಅವರು ಕಾಶ್ಮೀರ ವಿಚಾರವನ್ನು ನಿರ್ವಹಿಸಬೇಕಿತ್ತು' ಎಂದು ಅಭಿಪ್ರಾಯ ಪಟ್ಟರು.

ಅಕ್ಟೋಬರ್‌ 21ರ ಚುನಾವಣೆಯ ನಂತರ ದೇವೇಂದ್ರ ಫಡಣವೀಸ್‌ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'1950ರಲ್ಲಿ ಸರ್ದಾರ್ ಪಟೇಲ್‌ ಅವರ ನಿಧನ ನಂತರ, ಭಾರತ ಸರ್ಕಾರವು ಶೇಕ್‌ ಅಬ್ದುಲ್ಲ ಜತೆಗೆ ದೆಹಲಿ ಒಪ್ಪಂದಕ್ಕೆ ಸಹಿ ಮಾಡಿತು. ಇದು 370ನೇ ವಿಧಿಗೆ ತಳಹದಿಯಾಯಿತು' ಎಂದರು.

'ಪಾಕಿಸ್ತಾನದಿಂದ ಭಾರತಕ್ಕೆ ಬಂದವರಲ್ಲಿ ಇಬ್ಬರು, ಮನಮೋಹನ್‌ ಸಿಂಗ್‌ ಮತ್ತು ಐ.ಕೆ.ಗುಜ್ರಾಲ್‌ ಮುಂದೆ ಪ್ರಧಾನ ಮಂತ್ರಿಯಾದರು. ಎಲ್‌.ಕೆ.ಅಡ್ವಾಣಿ ಉಪ ಪ್ರಧಾನಿಯಾದರು. ಆದರೆ, ಜಮ್ಮು ಮತ್ತು ಕಾಶ್ಮೀರದತ್ತ ಹೋದವರಿಗೆ 370ನೇ ವಿಧಿ ರದ್ದಾಗುವವರೆಗೂ ಮತದಾನದ ಹಕ್ಕು ಇರಲಿಲ್ಲ. ಆ ಜನರೂ ಸಹ ಈಗ ಮತದಾನದ ಹಕ್ಕು ಚಲಾಯಿಸಬಹುದಾಗಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.