ಚೆನ್ನೈ (ಪಿಟಿಐ): ‘ಭ್ರಷ್ಟಾಚಾರ ನಡೆಸಿರುವ ಮುಖ್ಯಮಂತ್ರಿಕೆ. ಪಳನಿಸ್ವಾಮಿ ಅವರು ಬಿಜೆಪಿಯ ಬಲೆಗೆ ಬಿದ್ದಿದ್ದು, ಈಗ ಕೇಂದ್ರದ ಸಚಿವ ಅಮಿತ್ ಶಾ ಅವರ ಮುಂದೆ ತಲೆತಗ್ಗಿಸಿ ನಿಂತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಟೀಕಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮುಖ್ಯಮಂತ್ರಿಯನ್ನು ನಿಯಂತ್ರಿಸುವುದು ಮತ್ತು ತಮ್ಮ ಕಾಲು ಮುಟ್ಟಿ ನಮಸ್ಕರಿಸುವಂತೆ ಮಾಡುವುದನ್ನು ನೋಡಿದ್ದೇನೆ. ಇದನ್ನು ಸ್ವೀಕರಿಸಲು ನಾನು ಸಿದ್ಧನಿಲ್ಲ. ಉತ್ತರ ಪ್ರದೇಶದಲ್ಲೂ ಒಬ್ಬ ಭ್ರಷ್ಟ ನಾಯಕನನ್ನು ಬಲೆಗೆ ಬೀಳಿಸಿರುವ ಬಿಜೆಪಿಯು, ಶಾ ಅವರ ಮುಂದೆ ತಲೆತಗ್ಗಿಸಿ ನಿಲ್ಲುವಂತೆ ಮಾಡಿದೆ. ಪಳನಿಸ್ವಾಮಿಯ ಸ್ಥಿತಿಯೂ ಹಾಗೆಯೇ ಆಗಿದೆ’ ಎಂದು ರಾಹುಲ್ ಹೇಳಿದರು. ಆದರೆ ಉತ್ತರ ಪ್ರದೇಶದ ನಾಯಕನ ಹೆಸರನ್ನು ಅವರು ಉಲ್ಲೇಖಿಸಿಲ್ಲ.
‘ಶಾ ಅವರ ಮುಂದೆ ತಲೆ ತಗ್ಗಿಸುವ ಇಚ್ಛೆ ಮುಖ್ಯಮಂತ್ರಿಗೆ ಇಲ್ಲ. ಅಷ್ಟೇ ಅಲ್ಲ ತಮಿಳುನಾಡಿನ ಯಾವೊಬ್ಬನೂ ಅದನ್ನು ಬಯಸಲಾರ. ಭವ್ಯವಾದ ತಮಿಳು ಸಂಸ್ಕೃತಿಗೆ ಸೇರಿರುವ ವ್ಯಕ್ತಿಯು ಮೋದಿ, ಶಾ ಅವರ ಮುಂದೆ ತಲೆತಗ್ಗಿಸಿ ನಿಂತಿರುವುದು, ಅವರ ಕಾಲು ಮುಟ್ಟಿ ನಮಸ್ಕರಿಸುವುದನ್ನು ನೋಡಿ ನನಗೆ ಸಿಟ್ಟು ಬಂದಿತ್ತು. ಆದರೆ ಅವರು ಮಾಡಿದ ಭ್ರಷ್ಟಾಚಾರದ ಕಾರಣದಿಂದ ತಲೆತಗ್ಗಿಸಿ ನಿಲ್ಲಬೇಕಾಗಿ ಬಂದಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.