ಇಟಾನಗರ: ಅರುಣಾಚಲ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಸ್ಪರ್ಧೆ ಮಾಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಪ್ರವಾಸದಲ್ಲಿರುವ ಅವರು ವಿಶೇಷ ವಿಧಾನಸಭೆ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಈ ರಾಜ್ಯವು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿಯ ಸೂರ್ಯ ಪ್ರಕಾಶಿಸುತ್ತಿದೆ ಎಂದು ಮುರ್ಮು ಹೇಳಿದರು.
ಮಹಿಳೆಯರು ಎಲ್ಲ ವಲಯದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಅವರು ಹೆಚ್ಚಾಗಿ ಸ್ಪರ್ಧೆ ಮಾಡಬೇಕು ಎಂದು ಹೇಳಿದರು.
ಈ ಹಿಂದೆ ರಸ್ತೆ ಸಾರಿಗೆ, ರೈಲ್ವೆ ಹಾಗೂ ವಿಮಾನಯಾನದ ಕೊರತೆಯಿಂದಾಗಿ ಈಶಾನ್ಯದ ರಾಜ್ಯಗಳು ದೀರ್ಘಕಾಲದವರೆಗೆ ಆರ್ಥಿಕ ಅಭಿವೃದ್ಧಿಯಿಂದ ವಂಚಿತವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಭಾಗದ ಸಂಪರ್ಕ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಹೇರಳವಾದ ನಿಸರ್ಗ ಸಂಪತ್ತು ಹಾಗೂ ಮಾನವ ಸಂಪನ್ಮೂಲತೆಯಿಂದ ಕೂಡಿರುವ ಈ ರಾಜ್ಯ ಆಕರ್ಷಕ ಹೂಡಿಕೆ ತಾಣವಾಗಿದೆ. ಅರುಣಾಚಲ ರಾಜ್ಯ ವ್ಯಾಪಾರ ಮತ್ತು ವ್ಯವಹಾರದ ಕೇಂದ್ರವಾಗಲು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ ಎಂದು ಮುರ್ಮು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.