ಚೆನ್ನೈ: ತಮಿಳುನಾಡು ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಇ.ಕೆ.ಪಳನಿಸ್ವಾಮಿ ಅವರೇ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ. ಬಹುಮತದೊಂದಿಗೆ ಪಕ್ಷವೇ ಅಧಿಕಾರದ ಗದ್ದುಗೆ ಏರಲಿದ್ದು, ಯಾವುದೇ ಮೈತ್ರಿ ಸರ್ಕಾರ ರಚನೆ ಸಾಧ್ಯತೆ ಇಲ್ಲ ಎಂದು ಎಐಎಡಿಎಂಕೆ ಭಾನುವಾರ ಹೇಳಿದೆ.
ಇದು, ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯುವ ಜೊತೆಗೆ ಸರ್ಕಾರ ರಚನೆಗಾಗಿ ತಂತ್ರಗಾರಿಕೆಯಲ್ಲಿ ತೊಡಗಿರುವ ಬಿಜೆಪಿ ಸೇರಿದಂತೆ ತನ್ನ ಎಲ್ಲ ಮೈತ್ರಿ ಪಕ್ಷಗಳಿಗೆ ಎಐಎಡಿಎಂಕೆಯ ರವಾನಿಸಿದ ಸ್ಪಷ್ಟ ಸಂದೇಶ ಎಂದೇ ಹೇಳಲಾಗುತ್ತಿದೆ.
ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಭಾನುವಾರ ಆಯೋಜಿಸಿದ್ದ ಬಹಿರಂಗಸಭೆಯಲ್ಲಿ ಮಾತನಾಡಿದ ಪಕ್ಷದ ಉಪಸಮನ್ವಯಕಾರ ಕೆ.ಪಿ.ಮುನಿಸ್ವಾಮಿ, ಬಿಜೆಪಿಯ ಹೆಸರು ಹೇಳದೇ ಅದರ ವಿರುದ್ಧ ಹರಿಹಾಯ್ದರು. ಅದೇ ರೀತಿ ರಾಜ್ಯ ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ನಟರಾದ ಕಮಲ್ ಹಾಸನ್ ಹಾಗೂ ರಜನಿಕಾಂತ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಇದೇ ಬಹಿರಂಗಸಭೆಯ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಪನ್ನೀರ್ಸೆಲ್ವಂ ಮಾತ್ರ ಮೈತ್ರಿ ಅಥವಾ ರಾಷ್ಟ್ರೀಯ ಪಕ್ಷಗಳ ಕುರಿತಂತೆ ಕಟು ಪದಗಳಿಂದ ಟೀಕೆ ಮಾಡಲಿಲ್ಲ.
‘ಕೆಲವು ರಾಷ್ಟ್ರೀಯ ಪಕ್ಷಗಳು ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿವೆ. ಕಳೆದ 50 ವರ್ಷಗಳ ಕಾಲ ದ್ರಾವಿಡ ಪಕ್ಷಗಳು ರಾಜ್ಯವನ್ನಾಳಿವೆ. ಆದರೆ, ಹಿರಿಯರಾದ ಎಂ.ಕರುಣಾನಿಧಿ, ಜೆ.ಜಯಲಲಿತಾ ಅವರ ನಿಧನದ ನಂತರ ದ್ರಾವಿಡ ಪಕ್ಷಗಳಿಗೆ ಅಪಕೀರ್ತಿ ತರಲು ಈ ಕೆಲವು ರಾಷ್ಟ್ರೀಯ ಪಕ್ಷಗಳು ಯತ್ನಿಸುತ್ತಿವೆ’ ಎಂದು ಮುನಿಸ್ವಾಮಿ ಅವರು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.