ADVERTISEMENT

ರಾಮಮಂದಿರ‌ ನಿರ್ಮಾಣ: ಸಂಕ್ರಾಂತಿಯಿಂದ ದೇಣಿಗೆ ಸಂಗ್ರಹ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 9:45 IST
Last Updated 11 ನವೆಂಬರ್ 2020, 9:45 IST
ವಿಶ್ವಪ್ರಸನ್ನ ತೀರ್ಥರು ಪೇಜಾವರ‌ಮಠ
ವಿಶ್ವಪ್ರಸನ್ನ ತೀರ್ಥರು ಪೇಜಾವರ‌ಮಠ   

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದ್ದು, ಭಕ್ತರಿಂದ ದೇಣಿಗೆ‌ ಸಂಗ್ರಹಿಸಲು ಸಂಕ್ರಾಂತಿಯ ದಿನದಿಂದ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ.

ಇಲ್ಲಿನ ವಸಂತಕುಂಜ್ ಪ್ರದೇಶದಲ್ಲಿರುವ ಪೇಜಾವರ ಮಠದ ಶಾಖೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ‌ ವಿಶ್ವ ಹಿಂದೂ ಪರಿಷತ್‌ನ ಮಾರ್ಗದರ್ಶಕ ಮಂಡಳಿ ಸದಸ್ಯ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ‌ ಸ್ವಾಮೀಜಿ, ಸತತ 45 ದಿನಗಳ ಕಾಲ ವಿಶ್ವದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದೆ ಎಂದರು.

ಪ್ರತಿಯೊಬ್ಬ ಭಕ್ತ ಕನಿಷ್ಠ ₹ 10 ದೇಣಿಗೆ‌ ನೀಡುವಂತೆ ಮನವಿ ಮಾಡಲಾಗಿದೆ. ಪ್ರತಿ ಕುಟುಂಬ ಕನಿಷ್ಠ ‌₹ 100 ನೀಡಿ ರಸೀದಿ ಪಡೆಯುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ಮಂದಿರ ‌ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಅವರು ಕೋರಿದರು.

ADVERTISEMENT

ರಾಮಮಂದಿರ ಕಟ್ಟಡದ ನಿರ್ಮಾಣದ‌ ಅಂದಾಜು ವೆಚ್ಚ ಎಷ್ಟಿರಲಿದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸಂಜೆ ನಡೆಯಲಿರುವ ಕಾರ್ಯಕಾರಿ ಸಮಿತಿಯ ಮತ್ತೊಂದು ಸುತ್ತಿನ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ‌ ಇದೆ ಎಂದು ಅವರು ಹೇಳಿದರು.

ರಾಮಮಂದಿರ‌ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಎಲ್ ಅಂಡ್‌ ಟಿ ಸಂಸ್ಥೆಗೆ ವಹಿಸಲಾಗಿದೆ. ಟಾಟಾ ಕನ್ಸಲ್ಟನ್ಸಿ ಸಂಸ್ಥೆಗೆ ಉಸ್ತುವಾರಿ ಹೊಣೆ ವಹಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು. ಪೇಜಾವರ ಮಠದ ಶಾಖೆಯ ವ್ಯವಸ್ಥಾಪಕರಾದ ಯು.ವಿ. ದೇವಿಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.