ಮುಂಬೈ: ಬುಧವಾರದಿಂದ ಆಜಾನ್ (ಇಸ್ಲಾಮಿಕ್ ಪ್ರಾರ್ಥನೆ ಕರೆ) ಎಲ್ಲೆಲ್ಲಿ ಕೇಳುತ್ತದೆಯೋ ಅಲ್ಲೆಲ್ಲ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ಮೊಳಗಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಸಾರ್ವಜನಿಕರಿಗೆ ಬಹಿರಂಗ ಪತ್ರ ಬರೆದಿರುವ ಅವರು, ‘ಮೇ 4 ರಂದು ಧ್ವನಿವರ್ಧಕದಲ್ಲಿ ಆಜಾನ್ ಮೊಳಗುವುದನ್ನು ಕೇಳಿದರೆ, ಆ ಸ್ಥಳಗಳಲ್ಲಿ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕದ ಮೂಲಕ ಮೊಳಗಿಸಿ. ಆಗ ಈ ಧ್ವನಿವರ್ಧಕಗಳ ಅಡಚಣೆ ಅವರಿಗೂ ಅರ್ಥವಾಗುತ್ತದೆ’ ಎಂದು ರಾಜ್ ಠಾಕ್ರೆ ಪತ್ರದಲ್ಲಿ ಹೇಳಿದ್ದಾರೆ.
‘ಆಜಾನ್ ಕೇಳಿಸಿದರೆ ‘100’ಕ್ಕೆ ಕರೆ ಮಾಡಿ, ಪೊಲೀಸರಿಗೆ ದೂರು ನೀಡಿ. ಪ್ರತಿಯೊಬ್ಬರೂ ಪ್ರತಿದಿನ ದೂರು ನೀಡಬೇಕು’ ಎಂದು ಎಂಎನ್ಎಸ್ ನಾಯಕ ಹೇಳಿದ್ದಾರೆ.
‘ಎಲ್ಲಾ ಸ್ಥಳೀಯ ಮಂಡಲಗಳು ಮತ್ತು ನಾಗರಿಕರು ಮಸೀದಿಗಳ ಧ್ವನಿವರ್ಧಕಗಳ ಸಮಸ್ಯೆಯ ಬಗ್ಗೆ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಬೇಕು. ಅದನ್ನು ಪೊಲೀಸ್ ಠಾಣೆಗೆ ಸಲ್ಲಿಸಬೇಕು’ ಎಂದು ಅವರು ಹೇಳಿದರು.
ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ಇದೇ 4ರೊಳಗೆ ತೆರವುಗೊಳಿಸಬೇಕು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರ ವಿರುದ್ಧ ಔರಂಗಾಬಾದ್ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.