ADVERTISEMENT

ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿದ ಬಿಜೆಪಿ ಸಚಿವೆ! 

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 10:27 IST
Last Updated 24 ಜೂನ್ 2018, 10:27 IST
ಕೃಪೆ: ಟ್ವಿಟರ್  (ಎಎನ್‍ಐ)
ಕೃಪೆ: ಟ್ವಿಟರ್ (ಎಎನ್‍ಐ)   

ಭೋಪಾಲ್: ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆ ಸಚಿವೆ ಲಲಿತಾ ಯಾದವ್ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಲ್ಲಿನ ಛತ್ತರ್‍‍ಪುರ್‍‍ನಲ್ಲಿರುವ ದೇವಾಲಯವೊಂದರಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಲಲಿತಾ ಯಾದವ್ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮಳೆಗಾಗಿ ಇಂದ್ರ ದೇವನನ್ನು ಪ್ರಾರ್ಥಿಸುವ ಆಷಾಡ್ ಉತ್ಸವ್‍ನ್ನು ಲಲಿತಾ ಯಾದವ್ಮತ್ತು ಅಲ್ಲಿನ ಬಿಜೆಪಿ ಮುಖಂಡರು ಆಯೋಜಿಸಿದ್ದರು. ಕಪ್ಪೆಗಳಿಗೆ ಮದುವೆ ಮಾಡಿಸಿ ಇಂದ್ರ ದೇವನನ್ನು ಪೂಜಿಸಿದ ನಂತರ ಅನ್ನದಾನ ಏರ್ಪಡಿಸಲಾಗಿತ್ತು.

ಕಪ್ಪೆಗಳಿಗೆ ಮದುವೆ ಮಾಡಿಸುತ್ತಿರುವ ಲಲಿತಾ ಯಾದವ್ ( ಕೃಪೆ: ಹಿಂದೂಸ್ತಾನ್ ಟೈಮ್ಸ್ )


ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ದೇವಸ್ಥಾನದ ಅರ್ಚಕಆಚಾರ್ಯ ಬ್ರಿಜ್ ನಂದನ್, ಕಪ್ಪೆಗಳ ಮದುವೆ ಮತ್ತು ಅನ್ನದಾನ ಇಲ್ಲಿನ ಹಳೇ ಸಂಪ್ರದಾಯವಾಗಿದೆ, ಈ ರೀತಿ ಸಂಪ್ರದಾಯ ಆಚರಣೆ ಮಾಡಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ಕಪ್ಪೆಗಳ ಮದುವೆ ಮಾಡಿಸಿದ ಬಿಜೆಪಿ ಸಚಿವರು ಈ ಮೂಲಕ ಮೂಢನಂಬಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಛತ್ತರ್‍‍ಪುರ್‍‍ನಲ್ಲಿ ಜನರು ಕುಡಿಯುವ ನೀರಿಗೆ ಹರಸಾಹಸ ಪಡುತ್ತಿರುವಾಗ ಲಲಿತಾ ಯಾದವ್ ಅವರು ಕಪ್ಪೆಗಳಿಗೆ ಮದುವೆ ಮಾಡಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ ಎಂದಿದ್ದಾರೆ ಎಂದು ಛತ್ತರ್‍‍ಪುರ್‍‍ನ ಹಿರಿಯ ಕಾಂಗ್ರೆಸ್ ನಾಯಕ ಅಲೋಕ್ ಚತುರ್ವೇದಿ.

ಆದಾಗ್ಯೂ, ಕಪ್ಪೆಗಳ ಮದುವೆ ಬಗ್ಗೆ ಸಮರ್ಥನೆ ನೀಡಿದ ಲಲಿತಾ ಯಾದವ್, ಇದು ಮೂಢನಂಬಿಕೆಯಲ್ಲ.ಪಂಚಭೂತಗಳಿಂದ ಕೂಡಿರುವ ಪರಿಸರದಲ್ಲಿ ಸಮತೋಲನ ಕಾಪಾಡುವ ದೃಷ್ಟಿಯಿಂದ ಈ ಕಾರ್ಯ ಮಾಡಲಾಗಿದೆ.ಪರಿಸರ ನಾಶದಿಂದ ಬರ ಬಂದಿದೆ.ಹಾಗಾಗಿ ವಾತಾವರಣವನ್ನು ಸಮತೋಲದಲ್ಲಿರಿಸಲು ನಾವು ದೇವರ ಮೊರೆ ಹೋಗಿದ್ದೇವೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ದೇವರನ್ನು ಮೆಚ್ಚಿಸಲು ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುತ್ತಿದ್ದರು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.