ADVERTISEMENT

ರೇವಾಡಿ–ಮದಾರ್ ಸರಕು ಸಾಗಣೆ ಮಾರ್ಗ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಪಿಟಿಐ
Published 7 ಜನವರಿ 2021, 11:53 IST
Last Updated 7 ಜನವರಿ 2021, 11:53 IST
ಪ್ರಧಾನಿ ನರೇಂದ್ರ ಮೋದಿ ಗುರುವಾರ ರೇವಾಡಿ–ಮದಾರ್‌  ರೈಲ್ವೆ ಸರಕು ಸಾಗಣೆ ಮಾರ್ಗವನ್ನು ಉದ್ಘಾಟಿಸಿದರು.
ಪ್ರಧಾನಿ ನರೇಂದ್ರ ಮೋದಿ ಗುರುವಾರ ರೇವಾಡಿ–ಮದಾರ್‌  ರೈಲ್ವೆ ಸರಕು ಸಾಗಣೆ ಮಾರ್ಗವನ್ನು ಉದ್ಘಾಟಿಸಿದರು.   

ಚಂಡಿಗಡ: ಪಶ್ಚಿಮ ಭಾಗದ ಪ್ರತ್ಯೇಕ ಸರಕು ಸಾಗಾಟ ಕಾರಿಡಾರ್‌ನ (ವೆಸ್ಟರ್ನ್ ಡೆಡಿಕೇಟೆಡ್‌ ಫ್ರೀಟ್‌ ಕಾರಿಡಾರ್‌) ರೇವಾಡಿ–ಮದಾರ್‌ ರೈಲು ಮಾರ್ಗವನ್ನು (306 ಕಿ.ಮೀ) ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಷ್ಟ್ರಕ್ಕೆ ಸಮರ್ಪಿಸಿದರು.

ಪ್ರಧಾನಿಯವರು ಇದೇ ಸಂದರ್ಭದಲ್ಲಿ ವಿಡಿಯೋ-ಕಾನ್ಫರೆನ್ಸ್‌ ಮೂಲಕ ಹರಿಯಾಣದ ನ್ಯೂ ಅಟೇಲಿಯಿಂದ ರಾಜಸ್ಥಾನದ ಕಿಶನ್‌ಗಡವರೆಗೆ ಸಂಚರಿಸುವ 1.5 ಕಿ.ಮೀ ಉದ್ದದ ‘ಡಬಲ್‌ ಸ್ಟೇಕ್‌’ (ಕೆಳಗೆ– ಮೇಲೆ ಕಂಟೇನರ್‌ ಹೊಂದಿರುವ) ರೈಲಿಗೆ ಚಾಲನೆ ನೀಡಿದರು. ಇದು ವಿಶ್ವದಲ್ಲೇ ಮೊದಲನೆಯದು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ದೇಶದ ಮೂಲ ಸೌಕರ್ಯಗಳನ್ನು ಆಧುನೀಕರಿಸುವ ಮಹಾಯಜ್ಞಕ್ಕೆ ಹೊಸ ವೇಗ ದೊರೆತಂತಾಗಿದೆ’ ಎಂದು ಬಣ್ಣಿಸಿದರು.

ADVERTISEMENT

ಸರಕು ಸಾಗಣೆಗೆಂದೇ ರೂಪಿಸಿರುವ ಈ ಕಾರಿಡಾರ್ ಯೋಜನೆ, 21ನೇ ಶತಮಾನದ ಭಾರತದಲ್ಲಿ ದೊಡ್ಡ ಪರಿವರ್ತನೆ ತರಬಲ್ಲ ಸಾಮರ್ಥ್ಯ ಹೊಂದಿದೆ. ಕಳೆದ 5–6 ವರ್ಷಗಳ ಕಠಿಣ ಪರಿಶ್ರಮದಿಂದಾಗಿ, ಇಂಥದ್ದೊಂದು ದೊಡ್ಡ ಯೋಜನೆ ಸಾಕಾರಗೊಂಡಿದೆ ಎಂದು ಪ್ರಧಾನಿ ತಿಳಿಸಿದರು.

ಹತ್ತು ಹನ್ನೆರಡು ದಿನಗಳಲ್ಲಿ ಸಮರ್ಪಿತವಾದ ಹಲವು ಯೋಜನೆಗಳನ್ನು ಮೋದಿ ಅವರು ಪಟ್ಟಿ ಮಾಡಿದರು.

‘ಕೆಲವು ದಿನಗಳ ಹಿಂದೆ, ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧ ಎರಡು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಲಾಗಿದೆ. ಭಾರತ, ತನ್ನ ದೇಶವಾಸಿಗಳಿಗೆ ಸ್ವಂತ ಲಸಿಕೆ ನೀಡುತ್ತಿರುವುದು, ನಾಗರಿಕರಲ್ಲಿ ಹೊಸ ವಿಶ್ವಾಸ ಮೂಡಿಸಿದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.