ADVERTISEMENT

'ನನ್ನ ಚಿತ್ರ ರಚಿಸಿ ನಿಮಗಿಷ್ಟ ಬಂದಂತೆ ತಿರುಚಿ, ನಾನು ಎಫ್ಐಆರ್ ದಾಖಲಿಸಲ್ಲ':ಮೋದಿ

​ಪ್ರಜಾವಾಣಿ ವಾರ್ತೆ
Published 15 ಮೇ 2019, 14:34 IST
Last Updated 15 ಮೇ 2019, 14:34 IST
   

ಬಸಿರಹತ್: ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಳ್ಳುವ ಭಯ ತೃಣಮೂಲ ಕಾಂಗ್ರೆಸ್‌ಗೆ ಇದೆ. ಹಾಗಾಗಿ ಅವರು ಗೂಂಡಾಗಳಿಂದ ಗಲಭೆಮಾಡಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ಆರೋಪಿಸಿದ್ದಾರೆ.

ಬುಧವಾರ ಪಶ್ಚಿಮ ಬಂಗಾಳದ ಬಸಿರಹತ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಂಗಾಳದಲ್ಲಿ ಬಿಜೆಪಿ ಹವಾ ಇದೆ. ಇದರಿಂದ ದೀದಿಗೆ ಹೆದರಿಕೆ ಹುಟ್ಟಿದೆ. ಆಕೆ ಯಾವ ಮಟ್ಟಕ್ಕೆ ಇಳಿದಿದ್ದಾರೆ ನೋಡಿ ಎಂದಿದ್ದಾರೆ.

ಬಂಗಾಳದ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸವಾಗಿದ್ದು, ಹಿಂಸಾಚಾರದ ವೇಳೆ ವಿದ್ಯಾಸಾಗರ್ಕಾಲೇಜಿನಲ್ಲಿ ಮಂಗಳವಾರ ಸಂಜೆ ಲೂಟಿ ನಡೆದಿತ್ತು.ಇದು ಬಿಜೆಪಿ ಕೃತ್ಯ ಎಂದು ಟಿಎಂಸಿ ದೂರಿದ್ದು, ಇದು ಟಿಎಂಸಿಯದ್ದೇ ಕೃತ್ಯ ಎಂದು ಬಿಜೆಪಿ ಆರೋಪಿಸುತ್ತಿದೆ.

ADVERTISEMENT

ಮಮತಾ ಅಧಿಕಾರದಲ್ಲಿರುವ ಕಾರಣ ಪ್ರಜಾಪ್ರಭುತ್ವವನ್ನೇ ದಮನ ಮಾಡಲು ಬಯಸುತ್ತಿದ್ದಾರೆ.ಬಿಜೆಪಿಯಿಂದಾಗಿ ನಷ್ಟವಾದುದನ್ನು ತಾನು ಮುಯ್ಯಿ ತೀರಿಸಿಕೊಳ್ಳುವೆ ಎಂದು ಮಮತಾ ದೀದಿ ಎರಡು ದಿನಗಳ ಹಿಂದೆ ಹೇಳಿದ್ದರು. ಅವರು 24 ಗಂಟೆಗಳೊಳಗೆ ಈ ಕೆಲಸ ಮಾಡಿದರು ಎಂದಿದ್ದಾರೆ ಮೋದಿ.

ಅದೇ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಮಮತಾ ಬ್ಯಾನರ್ಜಿಯ ಚಿತ್ರ ತಿರುಚಿದ ಆರೋಪದಲ್ಲಿಬಿಜೆಪಿ ಯುವ ನಾಯಕಿಯನ್ನು ಬಂಧಿಸಿದ ಪ್ರಕರಣವನ್ನು ಉಲ್ಲೇಖಿಸಿದ ಮೋದಿ. ಮಮತಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ.

ನೀವು ನನ್ನ ಚಿತ್ರ ರಚಿಸಿ ನಿಮಗೆ ಮನಬಂದಂತೆ ತಿರುಚಿ. ಮೇ 23ರಂದು ನಾನು ಗೆಲುವು ಸಾಧಿಸಿದ ನಂತರ ಅದನ್ನು ನನಗೆ ಉಡುಗೊರೆಯಾಗಿ ನೀಡಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ನಮ್ಮದೇ. ಇದರಲ್ಲಿ ಪಶ್ಚಿಮ ಬಂಗಾಳ ಬಹುಮುಖ್ಯ ಪಾತ್ರ ವಹಿಸಲಿದೆ.ನೀವು ರಚಿಸಿದ ಚಿತ್ರಗಳನ್ನು ನಾನು ಸ್ವೀಕರಿಸುತ್ತೇನೆ, ಅದು ನನ್ನ ಪಾಲಿನ ನಿಧಿ.ನಾನು ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಮೋದಿಯನ್ನು ನಾನುಪ್ರಧಾನಿಯಾಗಿ ಪರಿಗಣಿಸುವುದಿಲ್ಲ ಎಂದು ಮಮತಾ ಹೇಳಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಪ್ರಧಾನಿ, ತನ್ನ ನೆರಳನ್ನು ನೋಡಿ ಬೆಚ್ಚಿಬೀಳುವ ವ್ಯಕ್ತಿಯಂತಾಗಿದ್ದಾರೆ ಮಮತಾ.ಆಕೆ ಎಲ್ಲ ಮಿತಿಗಳನ್ನು ಮೀರಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.ಆಕೆ ನನ್ನನ್ನು ದೇಶದ ಪ್ರಧಾನಿಯಾಗಿ ಪರಿಗಣಿಸುತ್ತಿಲ್ಲ ಆದರೆ ಪಾಕಿಸ್ತಾನದ ಪ್ರಧಾನಿಯನ್ನು ಪಾಕ್ ಪ್ರಧಾನಿಯಾಗಿ ಪರಿಗಣಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.