ನವದೆಹಲಿ: ದೇಶದ ಯುವಜನರಿಗೆ ಜೀವನೋಪಾಯ ಕಲ್ಪಿಸಲು ಹಾಗೂ ಸರ್ಕಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ.
ಛಾವ್ಲಾ ಬಿಎಸ್ಎಫ್ ಕ್ಯಾಂಪ್ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಮಾತನಾಡಿದ ಸಿಂಗ್, ಯುವಕರು, ಮಹಿಳೆಯರು, ಹಿಂದುಳಿದವರು ಮತ್ತು ದುರ್ಬಲ ವರ್ಗಗಳ ಕಲ್ಯಾಣವು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಆದ್ಯತೆಯಾಗಲಿರಲಿದೆ ಎಂದಿದ್ದಾರೆ.
ಚುನಾವಣೆಗೆ ಅಣಿಯಾಗುತ್ತಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಆ ಎರಡು ರಾಜ್ಯಗಳನ್ನು ಹೊರತುಪಡಿಸಿ, ದೇಶದ ವಿವಿಧ ರಾಜ್ಯಗಳ 45 ಸ್ಥಳಗಳಲ್ಲಿ ಸುಮಾರು 71,056 ಜನರಿಗೆ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳನ್ನು ಮಂಗಳವಾರ ವಿತರಿಸಿದರು.ಅಕ್ಟೋಬರ್ ತಿಂಗಳಲ್ಲಿಯೂ 75,000 ಮಂದಿಗೆ ನೇಮಕಾತಿ ಪತ್ರ ವಿತರಿಸಲಾಗಿತ್ತು.
ಈ ಬಗ್ಗೆ ಮಾತನಾಡಿರುವ ಸಿಂಗ್, 'ಮೋದಿಯವರು ಆರಂಭದಿಂದ ಈವರೆಗೂ, ಯುವಜನರಿಗೆ ಜೀವನೋಪಾಯ, ಸರ್ಕಾರಿ ಉದ್ಯೋಗ ಮತ್ತು ಆದಾಯ ಸೃಷ್ಟಿಸುವ ವಿಚಾರಗಳಿಗೆ ನಿರಂತರವಾಗಿ ಪ್ರಧಾನ ಆದ್ಯತೆ ನೀಡಿದ್ದಾರೆ' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.