ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಲಡಾಖ್ ಭೇಟಿಯು ಸಶಸ್ತ್ರ ಪಡೆಗಳ ಸ್ಥೈರ್ಯ ಹೆಚ್ಚಿಸಿದೆ ಎಂದು ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮುಖ್ಯಸ್ಥ ಎಸ್.ಎಸ್.ದೇಸ್ವಾಲ್ ಹೇಳಿದ್ದಾರೆ.
ಭಾರತದ ಸಶಸ್ತ್ರ ಪಡೆಗಳ ಆತ್ಮವಿಶ್ವಾಸ ಅತ್ಯುನ್ನತ ಮಟ್ಟದಲ್ಲಿದೆ. ಈ ಹಿಂದಿನಂತೆಯೇ ದೇಶಕ್ಕಾಗಿ ಜೀವ ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ. ಚೀನಾ ಜತೆಗಿನ ಗಡಿ ಸಂಘರ್ಷ ಉಲ್ಬಣಗೊಂಡಿರುವ ಸಂದರ್ಭದಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
‘ರಾಷ್ಟ್ರದ ನಾಯಕತ್ವ, ರಾಜಕೀಯ ನಾಯಕತ್ವ, ಸಶಸ್ತ್ರ ಪಡೆಗಳು ಮತ್ತು ಯೋಧರು ದೇಶಕ್ಕೆ ಸಮರ್ಪಿತರಾಗಿದ್ದಾರೆ. ಎಲ್ಲ ಪಡೆಗಳು ಗಡಿ ಭದ್ರತೆಗೆ ಕಟಿಬದ್ಧರಾಗಿವೆ. ಅದು ಭಾರತೀಯ ಸೇನೆ ಆಗಿರಲಿ, ವಾಯುಪಡೆ ಆಗಿರಲಿ ಅಥವಾ ಐಟಿಬಿಪಿ ಆಗಿರಲಿ ಎಂದು ಅವರು ಹೇಳಿದ್ದಾರೆ.
10 ಸಾವಿರ ಹಾಸಿಗೆ ಸಾಮರ್ಥ್ಯದ ಕೋವಿಡ್ ಸೆಂಟರ್ನ ಉದ್ಘಾಟನಾ ಸಮಾರಂಭದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ಚೀನಾ ಜತೆಗಿನ 3,488 ಕಿಲೋ ಮೀಟರ್ ಉದ್ದದ ನೈಜ ನಿಯಂತ್ರಣ ರೇಖೆಯುದ್ದಕ್ಕೂ (ಎಲ್ಎಸಿ) ಐಟಿಬಿಪಿ ಯೋಧರು ಇತರ ಸೇನಾ ಸಿಬ್ಬಂದಿ ಜತೆಗೂಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಡಾಖ್ನಲ್ಲಿ ಚೀನಾ ಜತೆಗಿನ ಗಡಿ ಸಂಘರ್ಷದ ಬಳಿಕ ಎಲ್ಎಸಿಯಲ್ಲಿ ಸುಮಾರು 3,000ದಷ್ಟು ಹೆಚ್ಚು ಐಟಿಬಿಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.